ಕೋಲಾರ: ‘ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳನ್ನು ಪ್ರಾರಂಭಿಸಿದ ಮಾತ್ರಕ್ಕೆ ಜವಾಬ್ದಾರಿ ಮುಗಿಯುವುದಿಲ್ಲ, ದೈನಂದಿನ ಶಿಸ್ತು ಪಾಲನೆಯಲ್ಲಿ ಕ್ರಿಯಾಶೀಲರಾಗಿ ಸಂಸ್ಥೆಯ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ತಿಳಿಸಿದರು.
ನಗರದ ಸುಗುಣ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನೂತನ ಸ್ಕೌಟ್ಸ್- ಗೈಡ್ಸ್ ದಳಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ‘ಮಕ್ಕಳ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಸದೃಢತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳು ಪೂರಕವಾಗಿದೆ’ ಎಂದರು.
‘ಶಿಕ್ಷಣ ಇಲಾಖೆಯಲ್ಲಿ ಸಂಸ್ಥೆಯು ಅಂಗ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. 3 ವರ್ಷದಿಂದ 25 ವಯಸ್ಸಿನವರಿಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಉತ್ತಮ ಚಟುವಟಿಕೆಗಳನ್ನು ನಡೆಸಿದ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಮನ್ನಣೆ ಪಡೆದು ಸ್ವಯಂ ಸೇವಾ ಸಂಸ್ಥೆಯಾಗಿ ಹೆಸರಿಗೆ ಪಾತ್ರವಾಗಿದೆ’ ಎಂದು ವಿವರಿಸಿದರು.
‘ಶಾಲೆಗೆ ಸೇರಿದ ಎಲ್ಲ ಚಳುವಟಿಕೆಯಲ್ಲಿ ತರಬೇತಿ ಪಡೆದರೆ ಭವಿಷ್ಯದಲ್ಲಿ ಉಪಯೋಗವಾಗುತ್ತದೆ. ಸಂಸ್ಥೆ ನಡೆಸುವ ಶಿಬಿರಗಳು ಮಕ್ಕಳಿಗೆ ಜೀವನ ಕೌಶಲ ಬೆಳೆಸುವಲ್ಲಿ ಸಹಕಾರಿಯಾಗಿದೆ’ ಎಂದರು.
ಜಿಲ್ಲಾ ಗೈಡ್ಸ್ ಆಯುಕ್ತ ಕೆ.ಆರ್.ಜಯಶ್ರೀ ಮಾತನಾಡಿ, ‘ಮಕ್ಕಳಲ್ಲಿ ಬಾಲ್ಯದಿಂದಲೇ ಸ್ವಯಂ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣಗಳು, ಧೈರ್ಯ, ಕೌಶಲ, ದೇಶ ಭಕ್ತಿ ಮುಂತಾದ ಗುಣಗಳು ರೂಡಿಸಿಕೊಳ್ಳಲು ಸಂಸ್ಥೆ ಪೂರಕವಾಗಿದೆ’ ಎಂದು ಹೇಳಿದರು.
‘ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿನ ಚಟುವಟಿಕೆಗಳು ವಯಸ್ಸಿಗೆ ಅನುಗುಣವಾಗಿ ರಚಿತವಾಗಿದ್ದು ಎಲ್ಲಾ ಮಕ್ಕಳು ಭಾಗವಹಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಮಂಜುನಾಥ್ ಮಾತನಾಡಿ, ‘ಮಕ್ಕಳು ಕೇವಲ ಕಲಿಗೆ ಸಿಮೀತಗೊಳ್ಳದೆ ಸ್ವಯಂ ಸೇವಾ ಸಂಘಗಳ ಚಟವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.
‘ಸಂಸ್ಥೆಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪ್ರಮಾಣ ಪತ್ರ ಪಡೆದುಕೊಂಡರೆ ಶಿಕ್ಷಣ ಮತ್ತು ಉದ್ಯೋಗದಲ್ಲೂ ಮೀಸಲಾತಿ ದೊರೆಯುತ್ತದೆ. ಇದರ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹ ನೀಡಿದರು.
ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು. ಶಿಕ್ಷಕರಾದ ನಾಗಲಕ್ಷ್ಮಿ, ರೆಹಮಾನ್, ಸ್ಕೌಟ್ ಮಾಸ್ಟರ್ ವೆಂಕಟೇಶ್ ಹಾಜರಿದ್ದರು.