ಬಂಗಾರಪೇಟೆ: ತಾಲ್ಲೂಕಿನ ಸಾಕರಸನಹಳ್ಳಿ ಮಜರಾ ಮಲ್ಲೇಶನಪಾಳ್ಯ ಗ್ರಾಮದ ಸಮೀಪದ ಕಾಡಂಚಿನಲ್ಲಿ ದನ ಮೇಯಿಸುತ್ತಿದ್ದ ದನಗಾಹಿ ಮೇಲೆ ಆನೆ ದಾಳಿ ನಡೆಸಿದೆ.
ದಾಳಿಯಲ್ಲಿ ಮಲ್ಲೇಶನಪಾಳ್ಯದ ನಿವಾಸಿ ತಿಮ್ಮರಾಯಪ್ಪ(55) ಬಲಿಯಾಗಿದ್ದಾರೆ. ಸೋಮವಾರ ಈ ಘಟನೆ ನಡೆದಿದೆ. ಎರಡು ವಾರದಿಂದ ಆನೆ ಹಿಂಡು ಕಾಡನಂಚಿನಲ್ಲಿ ಅಲೆದಾಡುತ್ತಿದೆ ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದ್ದಾರೆ.
ಬೆಳೆ ಹಾನಿ ಜತೆಗೆ ಪ್ರಾಣ ಹಾನಿ ಸಂಭವಿಸುತ್ತಿದೆಯಾದರೂ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆಗಳು ಕಾಡಿನ ಆಚೆಗೆ ಸಂಚರಿಸಬಾರದು ಎಂದು ಕಾಡಂಚಿನಲ್ಲಿ ದೊಡ್ಡ ಹಳ್ಳ ತೋಡಲಾಗಿತ್ತು. ಆದರೆ ನಿರ್ವಹಣೆ ಇಲ್ಲದ ಕಾರಣ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ನಿವಾಸಿ ಸಾಕರಸನಹಳ್ಳಿ ಮಂಜುನಾಥ ಆರೋಪಿಸಿದ್ದಾರೆ.
ಆನೆ ಹಿಂಡು ಕಾಡಂಚಿನ ತೋಟಗಳಿಗೆ ನುಗ್ಗಿದ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುತ್ತಾರೆ. ಅದು ಬಿಟ್ಟರೆ ಅವರಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ರೈತರು ದೂರಿದ್ದಾರೆ.