ಬಂಗಾರಪೇಟೆ (ಕೋಲಾರ): ತಾಲ್ಲೂಕಿನ ಹಾರೋಹಳ್ಳಿ ಅಂಗನವಾಡಿ ಕೇಂದ್ರದಲ್ಲಿಬುಧವಾರ ಸಂಜೆಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಮೂರು ವರ್ಷದ ಮಗುವೊಂದನ್ನು ಶೌಚಾಲಯದಲ್ಲಿಯೇ ಬಿಟ್ಟು ಬಾಗಿಲು ಹಾಕಿಕೊಂಡು ಹೋಗಿದ್ದಾರೆ.
ಮಗು ಸಮಯಕ್ಕೆ ಸರಿಯಾಗಿ ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿದ್ದು, ಸುಳಿವು ಸಿಕ್ಕಿಲ್ಲ. ಅಂಗನವಾಡಿ ಕೇಂದ್ರದೊಳಗೆ ಒಮ್ಮೆ ಪರಿಶೀಲಿಸಲು ತೆರಳಿದಾಗ ಮಗು ಶೌಚಾಲಯದಲ್ಲಿ ಇರುವುದು ಕಂಡುಬಂದಿದೆ.
ಅಂಗನವಾಡಿ ಬಿಡುವಾಗ ಮಗು ಶೌಚಾಲಯಕ್ಕೆ ತೆರಳಿದ್ದು, ಅಲ್ಲಿಯೇ ಸುಮಾರು 40 ನಿಮಿಷ ನಿದ್ದೆ ಮಾಡಿದೆ. ಅಮ್ಮನ ಕೂಗಿಗೆ ಎಚ್ಚರಗೊಂಡು ಸ್ಪಂದಿಸಿದ್ದರಿಂದ ಮಗು ಅಲ್ಲಿರುವುದು ಖಾತರಿಯಾಗಿದೆ. ಮಗುವಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸಿಡಿಪಿಒ ಮುನಿರಾಜು ತಿಳಿಸಿದರು.
ಹಾರೋಹಳ್ಳಿ ಅಂಗನವಾಡಿ ಕೇಂದ್ರದಲ್ಲಿ 8 ಮಕ್ಕಳಿದ್ದು, ಸಂಜೆ 4 ಗಂಟೆಗೆ ಮಕ್ಕಳನ್ನು ಮನೆಗೆ ಕಳುಹಿಸುವ ವೇಳೆ ಲೋಪ ನಡೆದಿದೆ. ಎಲ್ಲ ಮಕ್ಕಳು ಶಾಲೆ ಅಕ್ಕಪಕ್ಕದ ಮನೆಯವರಾಗಿದ್ದು, ಈ ಮಗುವು ತೆರಳಿದೆ ಎಂದು ತಿಳಿದ ಅಂಗನವಾಡಿ ಸಹಾಯಕಿ ಬೀಗ ಹಾಕಿ ಹೋಗಿದ್ದಾರೆ.
ವಿಷಯ ತಿಳಿದು ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಸಿಡಿಪಿಒ ಕಚೇರಿಯ ಹಿರಿಯ ಮೇಲ್ವಿಚಾರಕಿ ಜ್ಯೋತಿ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷೆ ಶೋಭಾರಾಣಿ ಘಟನೆ ಬಗ್ಗೆ ಮಾಹಿತಿ ಪಡೆದರು.
‘ಹಾರೋಹಳ್ಳಿ ಘಟನೆ ಬಗ್ಗೆ ಪರಿಶೀಲಿ ಸಿದ್ದು, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಕರ್ತವ್ಯಲೋಪ ಎಸಗಿ ರುವುದು ಕಂಡುಬಂದಿದೆ. ಅವರನ್ನು ಸೇವೆಯಿಂದ ವಜಾಗೊಳಿಸಲು ಉಪ ನಿರ್ದೇಶಕರಿಗೆ ಶಿಫಾರಸು ಮಾಡ ಲಾಗಿದೆ’ ಎಂದು ಸಿಡಿಪಿಒ ತಿಳಿಸಿದರು.