ಕೋಲಾರ: ಅಯೋಧ್ಯೆ ಬಲಿದಾನ ದಿವಸ್ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಸಹಯೋಗದಲ್ಲಿ ಇಲ್ಲಿನ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಸೋಮವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಮಾತನಾಡಿದ ಬಜರಂಗ ದಳ ಜಿಲ್ಲಾ ಘಟಕದ ಸಂಚಾಲಕ ಬಾಲಾಜಿ, ‘ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪುಣ್ಯ ಭೂಮಿಯ ರಕ್ಷಣೆಗಾಗಿ ಇದೇ ದಿನ 1992ರಲ್ಲಿ ಹಲವರು ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದರು’ ಎಂದು ಹೇಳಿದರು.
‘ಆ ಹೋರಾಟಗಾರರ ಪ್ರಾಣಾರ್ಪಣೆಯಿಂದ ಇಂದು ಅಯೋಧ್ಯೆಯು ರಾಮನ ಜನ್ಮ ಭೂಮಿ ಎಂಬ ಮಾನ್ಯತೆ ಪಡೆದುಕೊಂಡಿದೆ. ಅಲ್ಲಿ ರಾಮನ ಬೃಹತ್ ದೇವಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದ್ದು, ಇದು ರಾಮ ಭಕ್ತರಿಗೆ ಸಿಕ್ಕ ಗೆಲುವು’ ಎಂದು ಸಂತಸ ವ್ಯಕ್ತಪಡಿಸಿದರು.
‘ರಾಮಮಂದಿರ ನಿರ್ಮಾಣವು ತಮ್ಮ ಧ್ಯೇಯವೆಂದು ಅನೇಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇಂದು ವಿವಾದಿತ ಜಾಗವು ರಾಮನ ಜನ್ಮ ಭೂಮಿ ಎಂದು ಹೇಳಲಾಗಿದ್ದು, ಇದು ರಾಮ ಭಕ್ತರಿಗೆ ಸಿಕ್ಕ ಜಯ’ ಎಂದು ಬಜರಂಗ ದಳ ಜಿಲ್ಲಾ ಸಂಚಾಲಕ ಬಾಬು ಅಭಿಪ್ರಾಯಪಟ್ಟರು.
‘ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಸುಂದರ ದೇವಾಲಯ ನಿರ್ಮಾಣವಾಗುತ್ತಿದೆ. ನೂರಾರು ವರ್ಷಗಳ ಹೋರಾಟಕ್ಕೆ ಈಗ ಪ್ರತಿಫಲ ಸಿಕ್ಕಿದಂತಾಗಿದೆ’ ಎಂದು ಬಣ್ಣಿಸಿದರು.
ಸಂಘಟನೆ ಮುಖಂಡರಾದ ವಿಜಯಕುಮಾರ್, ಅಪ್ಪಿ, ವಿಶ್ವನಾಥ್, ವಿನಯ್, ಮಹೇಶ್, ಸಾಯಿ ಸುಮನ್, ಗಂಗಾಧರ್, ಪವನ್, ವಿಶ್ವ, ಮಂಜು, ಕಾರ್ತಿಕ್, ರಾಜೇಶ್ ಪಾಲ್ಗೊಂಡರು.