ಕೋಲಾರ: ‘ಕನ್ನಡ ಭಾಷೆ ಕುರಿತು ಜನರಲ್ಲಿ ತಪ್ಪು ಗ್ರಹಿಕೆ ಇದೆ. ಕನ್ನಡ ನಾಶವಾಗಲಿದೆ ಎಂಬುದಾಗಿ ತಪ್ಪಾಗಿ ತಿಳಿದುಕೊಂಡಿದ್ದಾರೆ. ನಾನು 1969–70ರಲ್ಲಿ ಎಂ.ಎ ಮಾಡಲು ಬಂದಾಗ ಬೆಂಗಳೂರನ್ನು ತಮಿಳು ಭಾಷೆ ಆವರಿಸಿಕೊಳ್ಳಲಿದೆ ಎನ್ನುತ್ತಿದ್ದರು. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರ ಹೇಳಿದರು.
ನಗರದಲ್ಲಿ ಮಂಗಳವಾರ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ 6,703 ಭಾಷೆಗಳಿವೆ. ಸಣ್ಣಪುಟ್ಟ 30 ಸಾವಿರ ಭಾಷೆಗಳು ನಾಶವಾಗಿವೆ. 10 ಭಾಷೆಗಳು ಜಗತ್ತಿನ ಶೇ 50 ಭಾಗವನ್ನು ಆವರಿಸಿಕೊಂಡಿವೆ. ಅದರಲ್ಲಿ ಕನ್ನಡವೂ ಒಂದು’ ಎಂದರು.
‘ಜನ ಬಳಕೆ, ಶಿಕ್ಷಣದಲ್ಲಿ ಕನ್ನಡ ಕಲಿಕೆಯಿಂದ ಕನ್ನಡ ಉಳಿಯಲಿದೆ. ಕನ್ನಡಕ್ಕೆ ಆ ಶಕ್ತಿ ಇದೆ. ಇದು ಜನ ಭಾಷೆ. ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಇದಕ್ಕಿದೆ. ಯಾವ ಭಾಷೆ ಅರಗಿಸಿಕೊಳ್ಳುತ್ತದೆಯೋ ಆ ಭಾಷೆ ಉಳಿಯುತ್ತದೆ’ ಎಂದು ಪ್ರತಿಪಾದಿಸಿದರು.
‘ಭಾಷೆಯನ್ನು ಭ್ರಷ್ಟಗೊಳಿಸುವ ಜನರೇ ಹೆಚ್ಚಿದ್ದಾರೆ. ಒಂದು ಕಡೆ ಆರ್ಥಿಕ ಭ್ರಷ್ಟಾಚಾರ, ಇನ್ನೊಂದು ಕಡೆ ಭಾಷಿಕ ಭ್ರಷ್ಟಾಚಾರ ನಡೆಯುತ್ತಿದ್ದು, ಹುಸಿ ವ್ಯಾಖ್ಯಾನ ಮಾಡಲಾಗುತ್ತಿದೆ. ಭಾಷಿಕ ಹಿಂಸೆ ನಡೆಯುತ್ತಿದೆ’ ಎಂದರು.