ಕೋಲಾರ: ‘ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಸಾರಿಗೆ ಸಂಸ್ಥೆ ನೌಕರರ ಸಂಘದ ಶಾಖೆಯನ್ನು ಜಿಲ್ಲಾ ಮಟ್ಟದಲ್ಲಿ ಆರಂಭಿಸಲಾಗಿದ್ದು, ಸಾರಿಗೆ ನೌಕರರು ಇದರ ಪ್ರಯೋಜನ ಪಡೆಯಬೇಕು’ ಎಂದು ಬಿಎಂಎಸ್ ಜಿಲ್ಲಾ ಘಟಕದ ಸದಸ್ಯ ಕೆ.ವಿ.ಶಿವಕುಮಾರ್ ಸಲಹೆ ನೀಡಿದರು.
ಇಲ್ಲಿ ಭಾನುವಾರ ಸಾರಿಗೆ ಸಂಸ್ಥೆ ನೌಕರರ ಸಭೆಯಲ್ಲಿ ಮಾತನಾಡಿ, ‘ಈಗಾಗಲೇ ಭಾರತೀಯ ಮಜ್ದೂರ್ ಸಂಘವು ರಾಜ್ಯದೆಲ್ಲೆಡೆ ಶಾಖೆ ತೆರೆದು ವಿವಿಧ ವರ್ಗದ ಕಾರ್ಮಿಕರ ಸಂಘಟನೆಯಲ್ಲಿ ತೊಡಗಿದೆ. ಈಗ ಸಾರಿಗೆ ಸಂಸ್ಥೆಯ ನೌಕರರಿಗಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಶಾಖೆ ಆರಂಭಿಸಿದೆ’ ಎಂದು ಹೇಳಿದರು.
‘ಸಂಘವು ಸಾರಿಗೆ ಸಂಸ್ಥೆ ನೌಕರರ ಹಿತ ಕಾಪಾಡುವ ಧ್ಯೇಯ ಹೊಂದಿದೆ. ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆ ಸೇರಿ ಬಲಪಡಿಸಬೇಕು. ನೌಕರರು ತಮ್ಮ ಸಮಸ್ಯೆಗಳ ಬಗ್ಗೆ ಸಂಘದ ಪದಾಧಿಕಾರಿಗಳ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಕೆಎಸ್ಆರ್ಟಿಸಿ ಜಿಲ್ಲಾ ಕಾರ್ಮಿಕರ ಘಟಕವನ್ನು ಶೀಘ್ರವೇ ಉದ್ಘಾಟಿಸಲಾಗುವುದು. ನೌಕರರು ಮುಕ್ತವಾಗಿ ಸಲಹೆ ಸೂಚನೆ ನೀಡಬೇಕು’ ಎಂದು ತಿಳಿಸಿದರು.
ಬಿಎಂಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಆರಾಧ್ಯ, ಸಾರಿಗೆ ಸಂಸ್ಥೆ ನಿವೃತ್ತ ನೌಕರ ಕೆ.ಎನ್.ಎಂ.ಪ್ರಸಾದ್ ಹಾಜರಿದ್ದರು.