ಕೋಲಾರ: ನಗರದ ಚಿನ್ಮಯ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಾನುವಾರ ಕೃಷ್ಣ ಮತ್ತು ರಾಧೆ ವೇಷಧಾರಿಗಳ ಸ್ವರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿವೇಕ ಸಂಪದ ಪ್ರಚಾರಕ ಶ್ರೀಶೈಲನ್, ‘ಮಕ್ಕಳು ಸಂಸ್ಕೃತಿಯ ಕೇಂದ್ರ ಬಿಂದು. ವಿದೇಶಿ ಸಂಸ್ಕೃತಿಗೆ ಮಾರುಹೋಗದಂತೆ ಪೋಷಕರು ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.
‘ಮಕ್ಕಳಲ್ಲಿ ಹೊಸತನ, ಸನಾತನ ಪರಂಪರೆಯ ಅರಿವು ಮೂಡಿಸಬೇಕು. ಅವರಲ್ಲಿ ದೇವರನ್ನು ಕಾಣಬೇಕು ಎಂಬ ಮಾತು ನಿಜ. ನೀವೆಲ್ಲಾ ಬಾಲ ಕೃಷ್ಣರು ಇದ್ದಂತೆ. ಕೃಷ್ಟ ರಾಧೆಯರ ವೇಷಧಾರಿಗಳಾಗಿ ಬಂದಿರುವ ಮಕ್ಕಳು ನೂರಾರು ಕೃಷ್ಣರಂತೆ ಕಂಗೊಳಿಸುತ್ತಿದ್ದಾರೆ. ಇದೇ ರೀತಿ ಎಲ್ಲಾ ಶಾಲೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಮೂಲಕ ಮಕ್ಕಳಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಮೂಡಿಸುವ ಕೆಲಸ ಅಗಬೇಕು’ ಎಂದರು.
‘ಸ್ವರ್ಧೆಗಳ ಮೂಲಕ ನೂರಾರು ಶಾಲಾ ಮಕ್ಕಳಿಗೆ ಗೀತೆಯ ಸಾರವನ್ನು ತಿಳಿಸಿಕೊಡುವ ಈ ಶಾಲೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಶ್ಲಾಘಿಸಿದರು.
‘ಸನಾತನ ಸಂಸ್ಕೃತಿಯನ್ನು ಉಳಿಸುವ ಭಾಗವಾಗಿ ಭಗವದ್ಗೀತಾ ಸ್ವರ್ಧೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಪಿ.ಚಂದ್ರಪ್ರಕಾಶ್ ತಿಳಿಸಿದರು.
‘ಜಿಲ್ಲೆಯ ಶಾಲಾ ಮಕ್ಕಳು ಭಗವದ್ಗೀತೆಯನ್ನು ಕಲಿಯುವ ಪೂರಕ ವಾರಾವರಣ ಶಾಲೆಯಲ್ಲಿ ಇದೆ. ಗೀತೆಯ ಸ್ಮರಣೆ, ಅದರ ಮಹತ್ವ ಮಕ್ಕಳಿಗೆ ತಿಳಿಯುವಂತಾಗಲು ಸಂಸ್ಥೆ ಸ್ವರ್ಧೆಗಳನ್ನು ಆಯೋಜಿಸಿಕೊಂಡು ಬಂದಿದೆ’ ಎಂದು ವಿವರಿಸಿದರು.
ಶಾಲೆಯ ಆವರಣದಲ್ಲಿರುವ ಶ್ರೀಕೃಷ್ಣ ಮಂದಿರದಲ್ಲಿ ವಿಶೇಷ ಪೂಜೆ ನಡೆಯಿತು. ಕೃಷ್ಣನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.