ಕೋಲಾರ: ನಗರದಲ್ಲಿ ವಿವಿಧ ಯೋಜನೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಕೂಡಲೇ ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಸೋಮವಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ನಗರದಲ್ಲೆಡೆ ರಸ್ತೆಗಳಲ್ಲಿ ಸುಗಮವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬಂದಿದೆ. ಪ್ರಗತಿಯಲ್ಲಿ ವಿಳಂಬವಾದರೆ ನೋಟಿಸ್ ನೀಡುವುದಾಗಿ ನಗರಸಭೆ, ಜಲಮಂಡಳಿ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಅಂಬೇಡ್ಕರ್ ಸರ್ಕಲ್, ಕಾಲೇಜು ವೃತ್ತ, ಎಂ.ಜಿ ರಸ್ತೆ, ದೊಡ್ಡಪೇಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ ಸಾರ್ವಜನಿಕರ ಜೊತೆ ಮಾತನಾಡಿದರು.
ನಗರದ ಗಾಂಧಿ ಸರ್ಕಲ್ನ ಚಂಪಕ್ ವೃತ್ತದ ಬಳಿ ಸಣ್ಣ ರಸ್ತೆಯನ್ನು ಒತ್ತುವರಿ ಮಾಡಲಾಗಿದೆ ಎಂಬ ದೂರಿನ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಅವರಿಗೆ ಸೂಚನೆ ನೀಡಿದರು.
ನಗರೋತ್ಥಾನ, ಅಮೃತ್ ಸಿಟಿ ಯೋಜನೆಯಡಿ ಕೆಲವು ಕಾಮಗಾರಿ ನಡೆಯುತ್ತಿದ್ದು, ಅವುಗಳನ್ನು ತ್ವರಿತವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸತ್ಯಭಾಮ ತಿಳಿಸಿದರು.