ಕೋಲಾರ: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಸವಾಲಾಗಿ ಸ್ವೀಕರಿಸಿದ್ದು, ಕೋವಿಡ್ ಆತಂಕ, ಪರ, ವಿರೋಧದ ನಡುವೆ ಅತ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ನಡೆಸಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿಹೇಳಿದರು.
ಜಿಲ್ಲೆಯ 117 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಭಾಷಾ ವಿಷಯಗಳ ಅಂತಿಮ ದಿನದ ಪರೀಕ್ಷೆ ನಡೆದಿದ್ದು, ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ನಡೆದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಯಶಸ್ಸಿಗೆ ಕಾರಣರಾದ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಸಂಘ–ಸಂಸ್ಥೆಗಳು ಹಾಗೂ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ ಸೇವಾದಳ, ರೋಟರಿ, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತಿತರ ಸಂಸ್ಥೆಗಳಿಗೂ ಧನ್ಯವಾದ ಸಲ್ಲಿಸಿದರು.
ಪರೀಕ್ಷೆಯ ಅಂತಿಮ ದಿನವೂ ಕೋವಿಡ್ ಮಾರ್ಗಸೂಚಿ ಪಾಲಿಸಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಕಡಿಮೆ ಗೈರುಹಾಜರಿ ಕಂಡುಬಂದಿದ್ದು, ಹೆಚ್ಚಿನ ಮಕ್ಕಳು ಉತ್ಸಾಹದಿಂದ ಪರೀಕ್ಷೆ ಬರೆದಿದ್ದಾರೆ. ಯಾರಲ್ಲೂ ಆತಂಕ, ಭಯ ಕಾಣಲಿಲ್ಲ ಎಂದು ತಿಳಿಸಿದರು.
73 ಮಂದಿ ಗೈರು:
ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಭಾಷಾ ವಿಷಯಗಳ ಪರೀಕ್ಷೆಗೆ ನೋಂದಾಯಿಸಿದ್ದ ಒಟ್ಟು 20,123 ವಿದ್ಯಾರ್ಥಿಗಳ ಪೈಕಿ 20,050 ಹಾಜರಾಗಿದ್ದು 73 ಮಂದಿ ಗೈರಾಗಿದ್ದಾರೆ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್ ಮಾಹಿತಿ ನೀಡಿದರು.