ಮುಳಬಾಗಿಲು: ನಗರದ ದ್ರೌಪದಮ್ಮ ವಸಂತೋತ್ಸವ ಶುಕ್ರವಾರ ರಾತ್ರಿ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ದ್ರೌಪದಮ್ಮನ 118ನೇ ಕರಗ ಮಹೋತ್ಸವದ ನಂತರದ ಮಾರನೆಯ ದಿನ ನಡೆದ ವಸಂತೋತ್ಸವದಲ್ಲಿ ಕರಗಧಾರಿ ಒನಕೆಯ ಮೇಲೆ ಅರಿಷಿಣ ಮಿಶ್ರಣದ ನೀರಿನ ಬಿಂದಿಗೆಯನ್ನು ಇಟ್ಟುಕೊಂಡು ಮಾಡಿದ ನೃತ್ಯಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು.
ಸಂಗೀತ ವಾದ್ಯಗಳ ನಾದಕ್ಕೆ ಅನುಗುಣವಾಗಿ ಹೆಜ್ಜೆಯನ್ನು ಹಾಕುತ್ತಾ ಒನಕೆಯ ಮೇಲಿನ ನೀರನ್ನು ನೃತ್ಯದ ಮೂಲಕವೇ ಹೊರ ಚೆಲ್ಲುತ್ತಾ, ಇಡೀ ಬಿಂದಿಗೆಯಲ್ಲಿದ್ದ ನೀರನ್ನು ಖಾಲಿ ಮಾಡುವ ಮೂಲಕ ನೃತ್ಯ ಮಾಡುತ್ತಾ ನೆರೆದಿದ್ದ ಜನರನ್ನು ಮೋಡಿ ಮಾಡಿದರು.
ನಂತರ ಒಂದರ ಮೇಲೊಂದು ಮೂರು ಬಿಂದಿಗೆಗಳನ್ನು ಒನಕೆಯ ಮೇಲೆ ಕೂರಿಸಿಕೊಂಡು , ಮೂರೂ ಬಿಂದಿಗೆಗಳಲ್ಲಿನ ನೀರು ಹೊರ ಚೆಲ್ಲುವಂತೆ ನೃತ್ಯ ಮಾಡುತ್ತಾ ವಸಂತೋತ್ಸವದ ಜೊತೆಗೆ ಕರಗ ಕಾರ್ಯಕ್ರಮಗಳು ಕೊನೆಗೊಂಡವು.
ವಸಂತೋತ್ಸವದ ಬಳಿಕ ಅರಿಶಿನ ಬಟ್ಟೆಗಳನ್ನು ತೊಟ್ಟಿದ್ದ ಮಾಲಾಧಾರಿಗಳು ಹಾಗೂ ಗ್ರಾಮಸ್ಥರು ಅರಿಶಿಣದ ನೀರನ್ನು ಒಬ್ಬರ ಮೇಲೆ ಒಬ್ಬರು ಬಿಂದಿಗಳಲ್ಲಿ ಎರಚಿಕೊಂಡು ಸಾಂಪ್ರದಾಯಿಕ ಪದ್ಧತಿಯ ಆಚರಣೆ ಮಾಡಿದರು.