ಕೋಲಾರ: ‘ಜನಪದ ಕಲೆಯು ಸಂಸ್ಕೃತಿ ಉಳಿಸುವ ಸಾಧನ. ಜನಪದ ಕಲೆ ನಂಬಿ ಬಹಳಷ್ಟು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಕೋವಿಡ್ ಮತ್ತು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನಪದ ಕಲಾವಿದರಿಗೆ ಸರ್ಕಾರ ಸಹಾಯಹಸ್ತ ಚಾಚಬೇಕು’ ಎಂದು ಜನಶಕ್ತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಕೋರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಂತಿ ಸೌಹಾರ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ಚೌಡದೇನಹಳ್ಳಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕೋವಿಡ್ 2ನೇ ಅಲೆ ಭೀತಿಯಿಂದ ಜನಪದ ಕಲಾವಿದರಿಗೆ ಕಾರ್ಯಕ್ರಮಗಳು ಸಿಗದಂತಾಗಿದೆ. ಇದರಿಂದ ಕಲಾವಿದರಿಗೆ ಸಂಪಾದನೆ ಇಲ್ಲವಾಗಿದೆ. ದುಡಿಮೆ ಇಲ್ಲದೆ ಕಲಾವಿದರು ಜೀವನ ಸಾಗಿಸುವುದು ಹೇಗೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜನಪದ ಕಲಾವಿದರಿಗೆ ಕಾರ್ಯಕ್ರಮಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಕಲಾವಿದರು ಸಂಕಷ್ಟದಲ್ಲಿದ್ದಾಗ ಆರ್ಥಿಕ ನೆರವು, ಆಹಾರ ಪದಾರ್ಥಗಳ ಕಿಟ್ ಸಹ ನೀಡಿದೆ. ಪ್ರತಿ ಕಲಾವಿದನಿಗೆ ದಿನಕ್ಕೆ ₹ 500 ಸಂಭಾವನೆ ಸಿಗುವಂತಾದರೆ ಕಲಾವಿದರು ಬದುಕಲು ಸಾಧ್ಯ’ ಎಂದರು.
‘ಗ್ರಾಮೀಣ ಪ್ರದೇಶದಲ್ಲಿ ಜನಪದ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಯುವಕ ಯುವತಿಯರು ಇಂಟರ್ನೆಟ್ ಮತ್ತು ಮೊಬೈಲ್ ಬಳಕೆಯ ಗೀಳಿನಲ್ಲಿ ಜನಪದ ಕಲೆಗಳನ್ನು ಮರೆಯುತ್ತಿದ್ದಾರೆ’ ಎಂದು ಚೌಡದೇನಹಳ್ಳಿ ಗ್ರಾಮಸ್ಥ ಚಿಕ್ಕಮುನಿಯಪ್ಪ ಕಳವಳ ವ್ಯಕ್ತಪಡಿಸಿದರು.
ಬಿ.ಸೌದಾಮಿನಿ ಮತ್ತು ತಂಡ, ಅಂಕಿತಾ ಮತ್ತು ಜೀವನಶ್ರೀ ತಂಡ, ಈ ನೆಲ ಈ ಜಲ ಸಾಂಸ್ಕೃತಿಕ ತಂಡದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಂತಿ ಸೌಹಾರ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ಎಚ್.ಶಾಂತಮ್ಮ, ಕಲಾವಿದರಾದ ಮುನಿಯಪ್ಪ, ಗಂಗಾಧರ್, ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಸಂಘದ ಅಧ್ಯಕ್ಷೆ ರಾಧಾ ಪಾಲ್ಗೊಂಡರು.