ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ಸಂಪೂರ್ಣ ಬೆಂಬಲ: ಜಯರಾಂ ಘೋಷಣೆ

ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಜಯರಾಂ ಘೋಷಣೆ
Last Updated 8 ಜನವರಿ 2023, 6:37 IST
ಅಕ್ಷರ ಗಾತ್ರ

ಕೋಲಾರ: ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತವಾಗಿದ್ದು, ಅವರಿಗೆ ಜಿಲ್ಲಾ ಕುರುಬರ ಸಂಘ ಸಂಪೂರ್ಣ ಬೆಂಬಲ ಘೋಷಿಸುತ್ತದೆ’ ಎಂದು ಸಂಘದ ಕಾರ್ಯಾಧ್ಯಕ್ಷ ಜೆ.ಕೆ.ಜಯರಾಂ ತಿಳಿಸಿದರು.

‘ಜ.9ರಂದು ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಸಭೆಯಲ್ಲಿ ಘೋಷಿಸಲಿದ್ದಾರೆ. ಕುರುಬ ಸಮುದಾಯದ ಎಲ್ಲರೂ ಅವರಿಗೆ ಅದ್ದೂರಿ ಸ್ವಾಗತ ನೀಡಬೇಕು’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.

‘ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ₹ 170 ಕೋಟಿ ಅನುದಾನ ನೀಡಿದ್ದಾರೆ. ಕನಕ ಸಮುದಾಯ ಭವನ ನಿರ್ಮಾಣಕ್ಕೆ ₹ 1 ಕೋಟಿ ಬಿಡುಗಡೆ ಮಾಡಿಸಿರುವುದಾಗಿ ವರ್ತೂರು ಪ್ರಕಾಶ್ ಈಗ ಸುಳ್ಳು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಆ ಹಣ ಘೋಷಣೆ ಮಾಡಿದ್ದರು. ಕಾರಣಾಂತರದಿಂದ ಬಳಸಿಕೊಂಡಿರಲಿಲ್ಲ. 10 ವರ್ಷ ಶಾಸಕರಾಗಿದ್ದ ಪ್ರಕಾಶ್‌ ಏನು ಮಾಡಿದರು’ ಎಂದು ಪ್ರಶ್ನಿಸಿದರು.

‘ನರೇಂದ್ರ ಮೋದಿ ತನ್ನ ನಾಯಕ ಎಂದು ಈಗ ಹೇಳುತ್ತಿರುವ ವರ್ತೂರ್ ಪ್ರಕಾಶ್, ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಕೋಲಾರದಲ್ಲಿ 2 ಬಾರಿ ಶಾಸಕರಾದರು ಎಂಬುದನ್ನು ಮರೆಯಬಾರದು’ ಎಂದರು.

‘ಸಿದ್ದರಾಮಯ್ಯನರು ಕೋಲಾರದಲ್ಲಿ ಸ್ಪರ್ಧೆ ಘೋಷಣೆ ಮಾಡಲಿ ಎಂಬುದಾಗಿ ಕುರುಬ ಸಮಾಜ ತುದಿಗಾಲದಲ್ಲಿ ನಿಂತು ಕಾಯುತ್ತಿದೆ. ಕ್ಷೇತ್ರದಲ್ಲಿ ನಮ್ಮ 28 ಸಾವಿರ ಮತಗಳಿವೆ. ಸಮುದಾಯದ ಎಲ್ಲರೂ ಒಗ್ಗೂಡಿ ಪ್ರತಿ‌ ಹಳ್ಳಿಗೂ ಹೋಗಿ ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತೇವೆ. ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅವರು ಗೆಲ್ಲುವುದರಲ್ಲಿ ಸಂಶಯ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಅಧ್ಯಕ್ಷ ಪ್ರಕಾಶ್, ಸಂಘದ ಉಪಾಧ್ಯಕ್ಷ ತ್ಯಾಗರಾಜ್, ಖಜಾಂಚಿ ಜಂಬಾಪುರ ವೆಂಕಟರಾಮ್, ಮುಖಂಡರಾದ ರಮೇಶ್, ಗೋವಿಂದರಾಜು, ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT