ರೈತರ ಸಮಸ್ಯೆಗೆ ಸರ್ಕಾರದಿಂದ ಪರಿಹಾರ

ಕೋಲಾರ: ರಾಜ್ಯದಲ್ಲಿ ಪಕ್ಷ ಸಂಘಟನೆ ಜತೆಗೆ ರೈತರ ಸಮಸ್ಯೆ ಗುರುತಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪರಿಹರಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.
ತಾಲ್ಲೂಕಿನ ವಡಗೂರು ಗ್ರಾಮದಲ್ಲಿ ಭಾನುವಾರ ರೈತರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೃಷಿ ದ್ವಿಗುಣಗೊಳಿಸಲು ಚರ್ಚಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ರೈತರ 21 ಕೋಟಿ ಜಮೀನಿದೆ. ಇದರಲ್ಲಿ 5 ಲಕ್ಷ ಜಮೀನುಗಳ ಬೆಳೆ ಸಮೀಕ್ಷೆ ಆಗಿದೆ. ಸಮೀಕ್ಷೆ ಆಧಾರದಲ್ಲೇ ಸರ್ಕಾರದ ಪರಿಹಾರ ಘೋಷಿಸಲಾಗುತ್ತದೆ. ರೈತರ ಬೆಳೆ ಸಮೀಕ್ಷೆಯು ರಾಜ್ಯದಲ್ಲಿ ಕೇವಲ ಶೇ 30 ದಾಟಿಲ್ಲ ಎಂದರು.
ದೇಶದಲ್ಲಿ ಕೊರೊನಾದಿಂದ ಉದ್ಯೋಗ ನೆಲೆಕಚ್ಚಿರುವ ಸಂದರ್ಭದಲ್ಲಿ ಕೃಷಿ ಉದ್ಯೋಗ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೊರೊನಾ ನಂತರ ಕೃಷಿ ಚಟುವಟಿಕೆಗಳು ಶೇ 7ರಷ್ಟು ಹೆಚ್ಚಳವಾಗಿದೆ ಎಂದರು.
ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಹಿಂದೆ ಯಾವುದೇ ರೈತರಿಗೆ ಪರಿಹಾರ ಪಡೆಯಲು ದಳ್ಳಾಳಿಗಳ ಬಳಿ ಹೋಗಬೇಕಾಗಿತ್ತು. ಬಿಜೆಪಿ ಸರ್ಕಾರ ಬಂದ ನಂತರ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುವಂತೆ ಮಾಡಲಾಗಿದೆ ಎಂದರು.
ಸಂವಾದದಲ್ಲಿ ತಿಪ್ಪಸಂದ್ರ ರೈತ ಶ್ರೀನಿವಾಸ್ ಮಾತನಾಡಿ, ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಶೇ 8ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ರೈತರಿಗೆ ಸರ್ಕಾರದಿಂದ ಸಹಾಯಧನ ಸಿಗುತ್ತಿಲ್ಲ ಎಂದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಉಪಾಧ್ಯಕ್ಷ ಲೋಕೇಶ್ ಗೌಡ, ಖಜಾಂಚಿ ಲಲ್ಲೇಶ್ ರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್, ಲಕ್ಷಣ್ ಗೌಡ, ನೆನಮನಹಳ್ಳಿ ಚಂದ್ರಶೇಖರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.