ಸಿದ್ದರಾಮಯ್ಯ ಗೆದ್ದರೆ ದಲಿತರನ್ನು ತುಳಿದು ಸಿ.ಎಂ: ಡಾ.ಎಂ.ವೆಂಕಟಸ್ವಾಮಿ

ಕೋಲಾರ: ‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರನ್ನು ಸೋಲಿಸುವ ಪಣತೊಡಿ. ಯಾವುದೇ ಕಾರಣಕ್ಕೂ ಶಾಸಕರಾಗಲು ಬಿಡಬೇಡಿ. ಗೆದ್ದರೆ ದಲಿತರನ್ನು ತುಳಿದು ಮುಖ್ಯಮಂತ್ರಿ ಆಗುತ್ತಾರೆ' ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ–ಆಠವಾಳೆ) ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಎಚ್ಚರಿಸಿದರು.
ಆರ್ಪಿಐ ಜಿಲ್ಲಾ ಘಟಕ ಸೋಮವಾರ ಇಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕರ್ತರ ಸಮಾವೇಶ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಕೋಲಾರದ ಹಳ್ಳಿಹಳ್ಳಿಗಳಲ್ಲಿ ಸಿದ್ದರಾಮಯ್ಯ ಹಟಾವೋ ಘೋಷಣೆ ಮೊಳಗಿಸಬೇಕು. ಅವರನ್ನು ಇಲ್ಲಿಗೆ ಕರೆತಂದಿರುವ ದಲಿತ
ಮುಖಂಡರನ್ನೂ ದೂರವಿಡಬೇಕು. ಅವರು ದಲಿತರಿಗೆ ಏನೆಲ್ಲಾ ಅನ್ಯಾಯ ಮಾಡಿದ್ದಾರೆ ಎಂಬುದರ ಕುರಿತು ದಲಿತ ಮುಖಂಡ ಎಂ.ನಾರಾಯಣಸ್ವಾಮಿ ಕರಪತ್ರ ಹಂಚುತ್ತಿದ್ದಾರೆ. ಈ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆಯೂ ನಡೆಯುತ್ತಿದೆ. ಇದೊಂದು ಒಳ್ಳೆಯ ಕಾರ್ಯ' ಎಂದು ಶ್ಲಾಘಿಸಿದರು.
‘ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವು ದಲಿತರನ್ನು ಜೀತಗಾರರನ್ನಾಗಿ ಬಳಸಿಕೊಂಡಿದೆ. ಯಾರಾದರೂ ಉದ್ಧಾರ ಆಗಿದ್ದಾರೆಯೇ? ನನ್ನ ತಾತ, ಅಪ್ಪ ಜೀತಗಾರರಾಗಿದ್ದರು. ನಾನು ಏಕೆ ಜೀತಗಾರನಾಗಬೇಕು’ ಎಂದು ಪ್ರಶ್ನಿಸಿದರು.
‘ಎಲ್ಲಿಯವರೆಗೆ ಗಾಂಧಿ ಕುಟುಂಬಕ್ಕೆ ಜೈ ಎನ್ನುವುದನ್ನು ನೀವು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಗುಲಾಮರಾಗಿಯೇ ಇರುತ್ತೀರಿ. ಕಾಂಗ್ರೆಸ್ ಪಕ್ಷಕ್ಕೆ ಗುಲಾಮರಾಗಿರುತ್ತೀರೋ ಅಥವಾ ಅಂಬೇಡ್ಕರ್ ವಾದಿಯಾಗಿ ರಾಜ್ಯ ಆಳುತ್ತಿರೋ ನೀವೇ ನಿರ್ಧಾರ ಮಾಡಿಕೊಳ್ಳಿ’ ಎಂದರು.
ಕಾಂಗ್ರೆಸ್ ಸೋಲಿಸಲು ಬಿಜೆಪಿಗೆ ಬೆಂಬಲ:
'ನಮ್ಮ ಕೈಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಆಗುತ್ತಿಲ್ಲ. ಹೀಗಾಗಿ, ನಾವು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ. ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿಯಿಂದ ಆಗಲಿದೆ. ನಾವು ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡುತ್ತೇವೆ' ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.