ಕೆಜಿಎಫ್: ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್ ಕಾರ್ಖಾನೆ ಉಪಯೋಗಿಸದೆ ಉಳಿದಿರುವ ಸುಮಾರು 973 ಎಕರೆ ಖಾಲಿ ಜಾಗವನ್ನು ಕೈಗಾರಿಕೆ ಅಭಿವೃದ್ಧಿಗೆ ಉಪಯೋಗಿಸಲು ಶಿಫಾರಸು ಮಾಡಲಾಗುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ನಗರದ ಹೊರವಲಯದ ಅಜ್ಜಪಲ್ಲಿ ಗ್ರಾಮದ ಬಳಿ, ಬೆಮಲ್ ಕಾರ್ಖಾನೆ ಹಿಂಭಾಗದಲ್ಲಿರುವ ಖಾಲಿ ಪ್ರದೇಶಕ್ಕೆ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಬೆಮಲ್ ಕಾರ್ಖಾನೆ ರಾಜ್ಯ ಸರ್ಕಾರ ನೀಡಿದ್ದ ಸುಮಾರು ಒಂದು ಸಾವಿರ ಎಕರೆ ಪ್ರದೇಶವನ್ನು ಮಾತ್ರ ಉಪಯೋಗಿಸಿಕೊಂಡಿದೆ. ಉಳಿದ ಜಾಗವನ್ನು ಉಪಯೋಗಿಸದೆ ಬಿಟ್ಟಿದೆ. ಈ ಪ್ರದೇಶವು ಕೈಗಾರಿಕೆ ಅಭಿವೃದ್ಧಿಗೆ ಪೂರಕವಾಗಿದೆ. ಆದ್ದರಿಂದ ಶನಿವಾರದಂದು ಕೋಲಾರದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ವಿಷಯ ಚರ್ಚೆಯಾಗಲಿದೆ ಎಂದರು.
ಉದ್ಯೋಗ ಸೃಷ್ಟಿಸಬಲ್ಲ ಮತ್ತು ಆರ್ಥಿಕ ಪುನಶ್ಚೇತನ ನೀಡುವ ಕೈಗಾರಿಕೆಗಳ ಅವಶ್ಯಕತೆ ನಗರಕ್ಕೆ ಇದೆ. ಈ ಸಂಬಂಧ ಅಂಕಿ ಅಂಶಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರೊಡನೆ ಮೂರು ಬಾರಿ ಮಾತುಕತೆ ನಡೆಸಿದ ಪರಿಣಾಮ ಅವರು ಉನ್ನತ ಮಟ್ಟದ ತಂಡವನ್ನು ಈಚೆಗೆ ನಗರಕ್ಕೆ ಕಳಿಸಿದ್ದರು. ಅಧಿಕಾರಿಗಳು ಸಾಕಷ್ಟು ಅಂಕಿ ಅಂಶ, ಮಾಹಿತಿ ಕಲೆ ಹಾಕಿದ್ದಾರೆ. ಅವೆಲ್ಲವೂ ಹೊಸ ಕೈಗಾರಿಕೆ ಸ್ಥಾಪನೆಗೆ ಅನುಕೂಲವಾಗಿದೆ ಎಂದರು.
ಬೆಮಲ್ ತನ್ನ ಬಳಿ ಇರುವ ಹೆಚ್ಚುವರಿ ಜಮೀನನ್ನು ನೀಡಲು ಸಮ್ಮತಿಸಿದೆ. ಅದಕ್ಕೆ ಬೇಕಾದ ಪತ್ರ ವ್ಯವಹಾರಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿದೆ. ಬೆಮಲ್ಗೆ ನೀಡಿರುವ ಜಾಗ ಪುನಃ ರಾಜ್ಯ ಸರ್ಕಾರದ ತೆಕ್ಕೆಗೆ ಬಂದ ಮೇಲೆ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿಯು ಯೋಜನೆ ರೂಪಿಸುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ಸುಮಾರು 50 ಸಾವಿರ ಮಂದಿಗೆ ಉದ್ಯೋಗ ಅವಕಾಶಗಳು ಸಿಗುವ ಸಂಭವ ಇದೆ ಎಂದು ಶಾಸಕಿ ರೂಪಕಲಾ ತಿಳಿಸಿದರು.
ತಹಶೀಲ್ದಾರ್ ಕೆ.ರಮೇಶ್, ನಗರಸಭೆ ಸದಸ್ಯರಾದ ವಳ್ಳಲ್ ಮುನಿಸ್ವಾಮಿ, ಸೇಂದಿಲ್ ಕುಮಾರ್, ಶಕ್ತಿವೇಲ್, ಜರ್ಮನ್ ಜೂಲಿಯಸ್, ಎಪಿಎಂಸಿ ಅಧ್ಯಕ್ಷ ವಿಜಯ ರಾಘವರೆಡ್ಡಿ, ಮುಖಂಡರಾದ ನಂದಕುಮಾರ್, ದಾಡಿ ಸುರೇಶ್, ಆರ್. ನಾರಾಯಣರೆಡ್ಡಿ, ಫ್ರಾನ್ಸಿಸ್, ಪದ್ಮನಾಭರೆಡ್ಡಿ ಹಾಜರಿದ್ದರು.