ಕೆಜಿಎಫ್: ಕನ್ನಡದ ಬಹು ನಿರೀಕ್ಷಿತ ಚಿತ್ರ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಚಿತ್ರೀಕರಣಕ್ಕೆ ಇಲ್ಲಿನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕೆಜಿಎಫ್ನ ಚಿನ್ನದ ಗಣಿಗಾರಿಕೆ ಪ್ರದೇಶದಲ್ಲಿನ ಸೈನೈಡ್ ಗುಡ್ಡಗಳಲ್ಲಿ ಬೃಹತ್ ಸೆಟ್ ನಿರ್ಮಿಸಿ ಸುಮಾರು ಒಂದು ತಿಂಗಳಿನಿಂದ ಚಿತ್ರೀಕರಣ ನಡೆಸಲಾಗುತ್ತಿತ್ತು. ಚಿತ್ರೀಕರಣದಿಂದ ಪರಿಸರಕ್ಕೆ ಹಾನಿಯಾಗುತ್ತಿರುವ ಕಾರಣ ಚಿತ್ರೀಕರಣ ನಡೆಸದಂತೆ ಆದೇಶಿಸಬೇಕೆಂದು ಕೋರಿ ನಗರದ ನಿವಾಸಿ ಎನ್.ಶ್ರೀನಿವಾಸ್ ಎಂಬುವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ತಕ್ಷಣವೇ ಚಿತ್ರೀಕರಣ ಸ್ಥಗಿತಗೊಳಿಸಬೇಕೆಂದು ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಅವರಿಗೆ ಆದೇಶಿಸಿದೆ. ಪ್ರಕರಣದ ಬಗ್ಗೆ ಸೆ.23ರಂದು ಮತ್ತೆ ವಿಚಾರಣೆ ನಡೆಸಲಿದ್ದು, ಆವರೆಗೆ ಚಿತ್ರೀಕರಣ ನಡೆಸಬಾರದೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.