ಮಾರಿಕುಪ್ಪಂ–ಬೆಂಗಳೂರು ರೈಲ್ವೆ ಮಾರ್ಗದಲ್ಲಿ ಹೆಚ್ಚುವರಿ ರೈಲಿಗೆ ಒತ್ತಾಯ

ಕೆಜಿಎಫ್: ಮಾರಿಕುಪ್ಪಂನಿಂದ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಸ್ವರ್ಣ ರೈಲಿನಲ್ಲಿ ಕಾಲಿಡಲು ಸಹ ಜಾಗವಿಲ್ಲದಷ್ಟು ಜನಜಂಗುಳಿಯಿಂದ ಕೂಡಿದ್ದು, ನಿತ್ಯ ಪ್ರಮಾಣಿಕರ ಅನುಕೂಲಕ್ಕಾಗಿ ಮತ್ತೊಂದು ರೈಲು ಆರಂಭಿಸಬೇಕು ಎಂದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜ್ಯೋತಿಬಸು
ಆಗ್ರಹಿಸಿದ್ದಾರೆ.
ಮಾರಿಕುಪ್ಪಂನಿಂದ ಹೊರಡುವ ರೈಲಿನಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುವ ಸಾವಿರಾರು ಮಂದಿ ಸಂಚರಿಸುತ್ತಾರೆ. ರೈಲಿನಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ. ಮಹಿಳೆಯರ ಶೌಚಾಲಯದಲ್ಲಿ ಕೂಡ ಪ್ರಯಾಣಿಕರು ತುಂಬಿರುತ್ತಾರೆ. ಅಷ್ಟೊಂದು ಜನದಟ್ಟಣೆ ಇರುವ ರೈಲಿನಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಪ್ರಯಾಣ ಮಾಡುವುದು ದುಸ್ತರವಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದ ಐದು ರೈಲ್ವೆ ನಿಲ್ದಾಣದಿಂದ ಪ್ರತಿನಿತ್ಯ ಪ್ರಯಾಣ ಮಾಡುವವರು ಈ ಬವಣೆಯನ್ನು ಬಹಳ ವರ್ಷಗಳಿಂದ ಅನುಭವಿಸುತ್ತಿದ್ದಾರೆ. ಸಂಸದ ಎಸ್.ಮುನಿಸ್ವಾಮಿ ಅವರಿಗೆ ದಿನನಿತ್ಯ ಪ್ರಯಾಣಿಕರು ಮತ್ತು ಸಂಘ, ಸಂಸ್ಥೆಗಳು ಹಲವಾರು ಬಾರಿ ರೈಲಿನ ದುಃಸ್ಥಿತಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.
ಗಣಿ ಮುಚ್ಚಿದ ಮೇಲೆ ಪರ್ಯಾಯ ಉದ್ಯೋಗ ಅರಸಿ ಪ್ರತಿನಿತ್ಯ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಕೂಡಲೇ ಮೂಲ ಸೌಕರ್ಯ ಮತ್ತು ಹೆಚ್ಚುವರಿ ರೈಲು ಕಲ್ಪಿಸದಿದ್ದರೆ ಸಂಸದರ ವಿರುದ್ಧ ಸಿಪಿಐನಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.