ಕೋಲಾರ: ‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಅವರನ್ನು ಸ್ಮರಿಸುವುದು ಪ್ರಜೆಗಳ ಕರ್ತವ್ಯ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಹೇಳಿದರು.
ಇಲ್ಲಿ ಭಾನುವಾರ ಕೋಚಿಮುಲ್ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಪುಕ್ಕಟೆಯಾಗಿ ದೊರೆತಿಲ್ಲ. ಇದರ ಹಿಂದೆ ಸಾವಿರಾರು ಜನರ ಬಲಿದಾನವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ದಂಗೆ, ಹೋರಾಟವು ನಿಜಕ್ಕೂ ರೋಚಕ’ ಎಂದು ಅಭಿಪ್ರಾಯಪಟ್ಟರು.
‘ಹೋರಾಟವನ್ನೇ ತಮ್ಮ ಉಸಿರಾಗಿಸಿಕೊಂಡು ಬ್ರಿಟೀಷರ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ ಮಹನೀಯರನ್ನು ಎಲ್ಲರೂ ಸ್ಮರಿಸಬೇಕು. ಪ್ರಜೆಗಳ ಜೀವನ ಶೈಲಿ ಬೇರೆ ಬೇರೆಯಿದ್ದರೂ ಭಾರತದ ಪವಿತ್ರ ಗ್ರಂಥವಾಗಿರುವ ಸಂವಿಧಾನದ ಆಶಯದಂತೆ ಏಕತೆ, ಸಮಗ್ರತೆ ಕಾಪಾಡುವ ಸಂಕಲ್ಪ ಮಾಡಬೇಕು’ ಎಂದರು.
‘ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಜನ ಅನುಭವಿಸಿದ ಕಷ್ಟಗಳನ್ನು ಸ್ವಾತಂತ್ರ್ಯ ನಂತರದಲ್ಲಿ ಅನುಭವಿಸಬಾರದೆಂಬ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಸಂವಿಧಾನದಡಿ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬ ಪ್ರಜೆಯು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು’ ಎಂದು ಕೋಚಿಮುಲ್ ನಿರ್ದೇಶಕ ಕೆ.ಎನ್.ನಾಗರಾಜ್ ಸಲಹೆ ನೀಡಿದರು.
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಮಹೇಶ್, ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.