ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಪ್ಪುನೇರಳೆಗೆ ನುಸಿ ರೋಗ: ಕೀಟನಾಶಕಕ್ಕೆ ಮನವಿ

ರೇಷ್ಮೆ ಬೆಳೆಗಾರರು ಕಂಗಾಲು: ರೈತ ಸಂಘ ಸದಸ್ಯರ ಹೇಳಿಕೆ
Last Updated 2 ಆಗಸ್ಟ್ 2021, 15:26 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಹಿಪ್ಪುನೇರಳೆ ಸೊಪ್ಪಿನಲ್ಲಿ ಕಾಣಿಸಿಕೊಂಡಿರುವ ನುಸಿ ರೋಗ ಹತೋಟಿಗೆ ಉಚಿತವಾಗಿ ಕೀಟನಾಶಕ ನೀಡಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಸೋಮವಾರ ರೇಷ್ಮೆ ಇಲಾಖೆ ಉಪ ನಿರ್ದೇಶಕ ಕಾಳಪ್ಪ ಅವರಿಗೆ ಮನವಿ ಸಲ್ಲಿಸಿದರು.

‘ಜಿಲ್ಲೆಯು ರೇಷ್ಮೆ ಬೆಳೆಗೆ ಹೆಸರುವಾಸಿಯಾಗಿದೆ. ಕೋವಿಡ್‌ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ರೇಷ್ಮೆ ಬೆಳೆ ಕೈಹಿಡಿಯಿತು. ಇದೀಗ ಹಿಪ್ಪುನೇರಳೆ ಬೆಳೆಯಲ್ಲಿ ನುಸಿ ರೋಗ ಕಾಣಿಸಿಕೊಂಡಿದ್ದು, ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ’ ಎಂದು ಸಂಘಟನೆ ಸದಸ್ಯರು ಹೇಳಿದರು.

‘ಜಿಲ್ಲೆಯ ಲಕ್ಷಾಂತರ ರೇಷ್ಮೆ ಬೆಳೆಗಾರರು ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದಿದ್ದಾರೆ, ಮಿಶ್ರ ಹಾಗೂ ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಹಿಪ್ಪುನೇರಳೆ ಸೊಪ್ಪಿಗೆ ನುಸಿ ರೋಗ ಬಂದಿರುವುದರಿಂದ ಗುಣಮಟ್ಟದ ಸೊಪ್ಪು ಸಿಗದೆ ರೈತರಿಗೆ ರೇಷ್ಮೆ ಹುಳು ಮೇಯಿಸಲು ಸಮಸ್ಯೆಯಾಗಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ರೈತರಿಗೆ ನುಸಿ ರೋಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ರೋಗವು ಹತೋಟಿಗೆ ಬರುತ್ತಿಲ್ಲ. ರೋಗ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೇಷ್ಮೆ ಇಲಾಖೆ ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ಕೊಡುತ್ತಿಲ್ಲ. ದಿನದಿಂದ ದಿನಕ್ಕೆ ರೋಗ ಉಲ್ಬಣಗೊಳ್ಳುತ್ತಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ’ ಎಂದರು.

ಗುಣಮಟ್ಟವಿಲ್ಲ: ‘ನುಸಿ ರೋಗದ ಕಾರಣಕ್ಕೆ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಸಿಗುತ್ತಿಲ್ಲ. ಈ ಬಾರಿ ಗುಣಮಟ್ಟದ ಗೂಡಿನ ನಿರೀಕ್ಷೆಯಲ್ಲಿದ್ದೆವು. ಆದರೆ, ರೋಗಬಾಧಿತ ಸೊಪ್ಪಿನಿಂದ ಅಂತಿಮ ಕ್ಷಣದಲ್ಲಿ ಬೆಳೆಯು ತೊಂಡೆ, ಸುಣ್ಣಕಟ್ಟು ರೋಗಗಳಿಗೆ ತುತ್ತಾಗುತ್ತಿದೆ’ ಎಂದು ಮಂಗಸಂದ್ರ ಗ್ರಾಮದ ರೇಷ್ಮೆ ಬೆಳೆಗಾರ ತಿಮ್ಮಣ್ಣ ಅಳಲು ತೋಡಿಕೊಂಡರು.

‘ರೇಷ್ಮೆ ಇಲಾಖೆ ಅಧಿಕಾರಿಗಳು ನುಸಿ ರೋಗದ ಬಗ್ಗೆ ತಮಗೆ ಮಾಹಿತಿಯಲ್ಲ ಎನ್ನುತ್ತಾರೆ. ವಿಜ್ಞಾನಿಗಳನ್ನು ಕರೆಸಿ ತಪಾಸಣೆ ಮಾಡಿಸಿ ನಂತರ ಮಾಹಿತಿ ಕೊಡುವುದಾಗಿ ಹೇಳುತ್ತಾರೆ. ಏಕ ಕಾಲದಲ್ಲಿ ಎಲ್ಲಾ ರೈತರು ಹಿಪ್ಪುನೇರಳೆ ಸೊಪ್ಪು ಕಟಾವು ಮಾಡಿ ಕೀಟನಾಶಕ ಸಿಂಪಡಿಸಿದರೆ ರೋಗ ಹತೋಟಿಗೆ ಬರುತ್ತದೆ ಎಂದು ಸಲಹೆ ನೀಡುತ್ತಾರೆ. ಆದರೆ, ಎಲ್ಲಾ ರೈತರು ಏಕಕಾಲದಲ್ಲಿ ಹಿಪ್ಪುನೇರಳೆ ಕಟಾವು ಮಾಡಲು ಸಾಧ್ಯವಿಲ್ಲ’ ಎಂದರು.

ಪರಿಹಾರ ಕೊಡಿ: ‘ನುಸಿ ರೋಗ ನಿಯಂತ್ರಿಸಲು ರೇಷ್ಮೆ ಬೆಳೆಗಾರರಿಗೆ ಉಚಿತವಾಗಿ ಕೀಟನಾಶಕ ನೀಡಬೇಕು. ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ₹ 50 ಸಾವಿರ ಪರಿಹಾರ ಕೊಟ್ಟು ರೈತರ ಹಿತ ಕಾಯಬೇಕು’ ಎಂದು ಸಂಘಟನೆ ಸದಸ್ಯರು ಮನವಿ ಮಾಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಸದಸ್ಯರಾದ ವೆಂಕಟೇಶಪ್ಪ, ನಾಗೇಶ್, ಅಶ್ವತ್ಥಪ್ಪ, ಹನುಮಯ್ಯ, ಚಂದ್ರಪ್ಪ, ವೆಂಕಟೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT