ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಪಿಎಂ ವಿಶ್ವಕರ್ಮ: ಜಿಲ್ಲೆಯಲ್ಲಿ 72,520 ಅರ್ಜಿ

Published 14 ಜನವರಿ 2024, 8:08 IST
Last Updated 14 ಜನವರಿ 2024, 8:08 IST
ಅಕ್ಷರ ಗಾತ್ರ

ಕೋಲಾರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಪಿಎಂ ವಿಶ್ವಕರ್ಮ ಯೋಜನೆಯಡಿ ಕೋಲಾರ ಜಿಲ್ಲೆಯಲ್ಲಿ ಈವರೆಗೆ 72,520 ಕುಶಲಕರ್ಮಿಗಳು ಅರ್ಜಿ ಸಲ್ಲಿಸಿ ತರಬೇತಿಗೆ ನೋಂದಣಿ ಮಾಡಿಕೊಂಡಿದ್ದಾರೆ.

ಈಗಾಗಲೇ 10 ಸಾವಿರಕ್ಕೂ ಅಧಿಕ ಕುಶಲಕರ್ಮಿಗಳ ತರಬೇತಿಗೆ ಒಪ್ಪಿಗೆ ಲಭಿಸಿದೆ. ಇದರಲ್ಲಿ ಜಿಲ್ಲೆಯು ದೇಶದಲ್ಲೇ ಮುಂಚೂಣಿಯಲ್ಲಿದೆ. ಅಲ್ಲದೇ, ಇಡೀ ರಾಜ್ಯದಲ್ಲಿ ಮೊದಲ ತರಬೇತಿ ಆರಂಭವಾಗಿದ್ದೇ ಕೋಲಾರದಲ್ಲಿ. ಈಗಾಗಲೇ ಒಂದು ಬ್ಯಾಚ್‌ಗೆ ತರಬೇತಿ ಪೂರ್ಣಗೊಂಡಿದೆ. ಸರ್ಕಾರಿ ಸಂಸ್ಥೆಗಳಲ್ಲದೇ ಖಾಸಗಿ ಸಂಸ್ಥೆಗಳಲ್ಲೂ ತರಬೇತಿಗೆ ಒಪ್ಪಿಗೆ ಲಭಿಸಿದೆ.

ಜ.12ರವರೆಗಿನ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಹೆಚ್ಚು ಅರ್ಜಿ ಸಲ್ಲಿಕೆಯಾದ ಜಿಲ್ಲೆಗಳಲ್ಲಿ ಕೋಲಾರ 11ನೇ ಸ್ಥಾನದಲ್ಲಿದೆ. ಬೆಳಗಾವಿ ಜಿಲ್ಲೆ (1,95,896) ಅಗ್ರಸ್ಥಾನದಲ್ಲಿದೆ. ಮೂರು ಹಂತಗಳ ಪರಿಶೀಲನೆ ಬಳಿಕ ಕುಶಲಕರ್ಮಿಗಳಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ.

‘ಶಿಫಾರಸ್ಸು ಮಾಡಲಾದ ಎಲ್ಲರಿಗೂ ಐದರಿಂದ ಏಳು ದಿನಗಳ ತರಬೇತಿ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಳಿಸಿದವರಿಗೆ ಕೇಂದ್ರ ಸರ್ಕಾರದಿಂದ ಪ್ರಮಾಣಪತ್ರ ನೀಡಲಾಗುತ್ತದೆ. ತರಬೇತಿಗೆ ಅನುಗುಣವಾಗಿ ₹ 1‌5 ಸಾವಿರ ಮೌಲ್ಯದ ಕೌಶಲ ಪರಿಕರ ಸಿಗುತ್ತದೆ. ಬಳಿಕ ಸಾಲ ದೊರೆಯುತ್ತದೆ. ಜಿಲ್ಲೆಯಲ್ಲಿ ಈವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಸುಮಾರು 50 ಸಾವಿರ ಮಂದಿಗೆ ತರಬೇತಿಗೆ ಅವಕಾಶ ಸಿಕ್ಕಿದೆ. ಹಂತಹಂತವಾಗಿ ತರಬೇತಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಲ ಕಸುಬುಗಳನ್ನು ನಡೆಸುವ 18 ವೃತ್ತಿಪರ ಸಮುದಾಯದವರ ಏಳಿಗೆಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಿದೆ. ಮರಗೆಲಸದವರು, ಗಾರೆ ಕೆಲಸಗಾರರು, ವಿಗ್ರಹ ತಯಾರಿಸುವವರು, ಕಲ್ಲು ಹೊಡೆಯುವವರು, ಟೇಲರ್‌ಗಳು, ಅಕ್ಕಸಾಲಿಗರು, ಕ್ಷೌರಿಕರು, ಅಗಸರು(ದೋಬಿ), ಶಿಲ್ಪಿಗಳು, ಬುಟ್ಟಿ– ಚಾಪೆ ಎಣೆಯುವವರು, ಕಸ ಪೊರಕೆ ತಯಾರಕರು, ನೇಕಾರರು, ಚಮ್ಮಾರರು, ಕಮ್ಮಾರರು, ಕುಂಬಾರರು, ಹೂವಿನ ಹಾರ ತಯಾರಕರು, ಮೀನು ಬಲೆ ತಯಾರಕರು, ದೋಣಿ ತಯಾರಕರು, ಆಯುಧ ತಯಾರಕರು, ಕಬ್ಬಿಣದ ಉಪಕರಣಗಾರರು, ಆಟಿಕೆ ತಯಾರಕರು, ಬೀಗ ತಯಾರಕರು ಈ ಯೋಜನೆಯ ಲಾಭ ಪಡೆಯಲು ಅರ್ಹರು. ಸಿಎಸ್‌ಸಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ತರಬೇತಿ ಪಡೆಯುವವರಿಗೆ ಪ್ರತಿ ದಿನಕ್ಕೆ ₹ 500 ಶಿಷ್ಯವೇತನ, ಊಟ– ವಸತಿ ಉಚಿತವಾಗಿ ನೀಡಲಾಗುತ್ತದೆ. ಯಾವುದೇ ಗ್ಯಾರಂಟಿ ಇಲ್ಲದೆ ₹ 1 ಲಕ್ಷ ಸಾಲ ನೀಡಲಾಗುತ್ತದೆ. 18 ತಿಂಗಳಲ್ಲಿ ಇದನ್ನು ಪಾವತಿಸಬೇಕು. ಫಲಾನುಭವಿ ಶೇ 5ರಷ್ಟು ಬಡ್ಡಿ ಪಾವತಿಸಬೇಕು. ಕೇಂದ್ರ ಸರ್ಕಾರ ಶೇ 8ರಷ್ಟು ಬಡ್ಡಿ ನೀಡುತ್ತದೆ. ಎರಡನೇ ಆವೃತ್ತಿಯಲ್ಲಿ ₹ 2 ಲಕ್ಷವನ್ನು ಸಾಲವಾಗಿ ನೀಡಲಾಗುತ್ತದೆ. 30 ತಿಂಗಳಲ್ಲಿ ಇದನ್ನು ಪಾವತಿ ಮಾಡಬೇಕು.

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಅರ್ಜಿಗಳು (19,44,200) ಸಲ್ಲಿಕೆಯಾಗಿವೆ. ಅವುಗಳಲ್ಲಿ ಮೂರು ಹಂತಗಳಲ್ಲಿ 86,829 ಅರ್ಜಿಗಳ ಪರಿಶೀಲನೆ ನಡೆದು ತರಬೇತಿಗೆ ಶಿಫಾರಸು ಮಾಡಲಾಗಿದೆ. ಟೇಲರಿಂಗ್‌ ತರಬೇತಿಗೆ 12,40,266 ಅರ್ಜಿ ಸಲ್ಲಿಕೆ ಆಗಿವೆ. ಮಾಲಾಕಾರರ ತರಬೇತಿಗೆ 1,50,571 ಮಂದಿ, ಕಾರ್ಪೆಂಟರ್‌ ತರಬೇತಿಗೆ 77,897 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಗ್ರಾಮ ಹಂತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ನಗರ–ಪಟ್ಟಣ ಹಂತಗಳಲ್ಲಿ ನಗರಸಭೆ, ಪುರಸಭೆ ವ್ಯಾಪ್ತಿಗಳಲ್ಲಿ ಪೌರಾಯುಕ್ತರು ಮೊದಲ ಹಂತದಲ್ಲಿ, ಎರಡನೇ ಹಂತದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಹಾಗೂ ಮೂರನೇ ಹಂತದಲ್ಲಿ ರಾಜ್ಯಮಟ್ಟದ ಪರಿಶೀಲನಾ ಸಮಿತಿ ಅರ್ಜಿಗಳನ್ನು ಪರಿಶೀಲಿಸುತ್ತದೆ. ಬಳಿಕಷ್ಟೇ ತರಬೇತಿಗೆ ಒಪ್ಪಿಗೆ ಸಿಗುತ್ತದೆ. 

ಜಿಲ್ಲೆಯಲ್ಲಿ ಅತ್ಯಧಿಕ ಕುಶಲಕರ್ಮಿಗಳಿಗೆ ತರಬೇತಿ ₹ 1‌5 ಸಾವಿರ ಮೌಲ್ಯದ ಕೌಶಲ ಪರಿಕರ ಲಭ್ಯ ಆರಂಭದಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ₹ 1 ಲಕ್ಷ ಸಾಲ
ಮೂರು ಹಂತಗಳಲ್ಲಿ ಪರಿಶೀಲನೆ ಮುಗಿದು ಜಿಲ್ಲೆಯ 10 ಸಾವಿರ ಕುಶಲಕರ್ಮಿಗಳಿಗೆ ತರಬೇತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಈ ಮೂಲಕ ದೇಶದಲ್ಲೇ ಮುಂಚೂಣಿಯಲ್ಲಿದ್ದೇವೆ
ಅಕ್ರಂ ಪಾಷ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT