ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿಯಲ್ಲಿ ಮರಳಿನ ದಿಬ್ಬ ಕುಸಿದು ಮೃತಪಟ್ಟಿದ್ದ ಕಾರ್ಮಿಕ ಅಯೂಬ್ (25) ಅವರ ಶವವನ್ನು ಪೊಲೀಸರು ಗುರುವಾರ ಹೊರತೆಗೆದು ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.
ಮುಳಬಾಗಿಲಿನ ಬೂಸಾಲಕುಂಟೆಯ ಅಯೂಬ್ ಅವರು ದೇವರಾಜ್ ಎಂಬುವರ ಜಮೀನಿನಲ್ಲಿ ಮರಳು ತೆಗೆಯುವ ವೇಳೆ ಬುಧವಾರ (ಜೂನ್ 3) ನಸುಕಿನಲ್ಲಿ ಮೃತಪಟ್ಟಿದ್ದರು. ಬಳಿಕ ಕದ್ದುಮುಚ್ಚಿ ಅಯೂಬ್ರ ಶವವನ್ನು ಬೂಸಾಲಕುಂಟೆಗೆ ಸಾಗಿಸಿಕೊಂಡು ಬಂದು ಹೂತಿಟ್ಟು ಪ್ರಕರಣ ಮರೆಮಾಚಲಾಗಿತ್ತು.
ಬುಧವಾರ ರಾತ್ರಿ ಈ ವಿಷಯ ತಿಳಿದ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದರು. ಗುರುವಾರ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಿದರು. ಮರಳು ದಂಧೆಯಲ್ಲಿ ಜಮೀನಿನ ಮಾಲೀಕ ದೇವರಾಜ್ರ ಪಾತ್ರವಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.