ಬಂಗಾರಪೇಟೆ: ಪಿಎಲ್ಡಿ ಬ್ಯಾಂಕ್ನಲ್ಲಿ ಬೆಳೆ ಸಾಲ, ಹೈನೋದ್ಯಮ ಸಾಲ, ಕುರಿ ಸಾಲ ಸೇರಿದಂತೆ ವಿವಿಧ ಸೌಲಭ್ಯಕ್ಕೆ ಪಡೆದಿರುವ ಸಾಲವನ್ನು ಕೂಡಲೇ ಪಾವತಿಸಬೇಕು ಎಂದು ಯಾವುದೇ ಮುನ್ಸೂಚನೆ ಇಲ್ಲದೆ ರೈತರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಮಾರ್ಚ್ 12ರಂದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಪುಟ್ಟಣ್ಣಯ್ಯ ಬಣದ ಜಿಲ್ಲಾ ಅಧ್ಯಕ್ಷ ಮರಗಲ್ ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ನಡೆದ ರೈತ ಸಂಘದ ಪೂರ್ವಭಾವಿ ಸಭೆ ಬಳಿಕ ಮಾತನಾಡಿದರು.
ಕೊರೊನಾ ಸಂಕಷ್ಟಕ್ಕೆ ಜನ ನಲುಗಿದ್ದಾರೆ. ರೈತರ ಪರ ನಿಲ್ಲಬೇಕಾದ ಸರ್ಕಾರ ಮತ್ತು ಬ್ಯಾಂಕ್ ಅಧಿಕಾರಿಗಳು ಕಣ್ಣು ಇದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ರೈತರ ಸಾಲ ಮನ್ನಾ ಎಂದು ಸುಳ್ಳು ಹೇಳಿಕೆ ನೀಡುವ ಸರ್ಕಾರಗಳು ದಿಢೀರನೇ ರೈತರಿಗೆ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಬಂಗಾರಪೇಟೆ ತಾಲ್ಲೂಕಿನ ಪಿಎಲ್ಡಿ ಬ್ಯಾಂಕ್ ಕಚೇರಿ ಮುಂದೆ ಜಾನುವಾರು, ಹಂದಿ, ನಾಯಿ, ಕತ್ತೆಗಳ ಸಮೇತ ತಮಟೆ ಬಾರಿಸಿ ಪ್ರತಿಭಟಿಸಲಾಗುವುದು ಎಂದರು.
ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ ಅಮರೇಶ್, ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ ಮುಜಾಮಿಲ್ ಅಹ್ಮದ್, ಬೃಹಾನ್ ಅಹ್ಮದ್, ಅಲ್ಲಿದಾ, ಜಿಲ್ಲಾ ಉಪಾಧ್ಯಕ್ಷ ಸ್ವಸ್ತಿಕ್ ಶಿವು, ಸಂಚಾಲಕ ಐತಾಂಡಹಳ್ಳಿ ಉದಯ್ಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ಎನ್. ರಾಜಶೇಖರ್ ಇದ್ದರು.