ಕೋಲಾರ: ಜಿಲ್ಲೆಯ ಕೆಜಿಎಫ್ ನಗರದ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದ ಜಾಗದಲ್ಲಿ ವಿಶ್ವನಾಥ್ ಎಂಬುವರು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸುವಂತೆ ಒತ್ತಾಯಿಸಿ ದೇವಾಲಯದ ಭಕ್ತರು ಇಲ್ಲಿ ಶನಿವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
‘ದೇವಾಲಯಕ್ಕೆ ಸೇರಿದ ಅಶ್ವತ್ಥಕಟ್ಟೆಯ ಮರದ ಕೊಂಬೆ ಕಡಿಯಲು ಅನುಮತಿ ಕೋರಿ ವಿಶ್ವನಾಥ್ ತಹಶಿಲ್ದಾರ್ಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ತಹಶೀಲ್ದಾರ್ ಪರಿಶೀಲನೆಗಾಗಿ ಸ್ಥಳಕ್ಕೆ ಬಂದಾಗ ಸಾರ್ವಜನಿಕರು ಮತ್ತು ಭಕ್ತರು ಮರದ ಕೊಂಬೆ ಕಡಿಯದಂತೆ ಒತ್ತಾಯಿಸಿದ್ದರು. ಈ ಸಂಗತಿಯನ್ನು ತಹಶೀಲ್ದಾರ್ ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ಹೇಳಿದ್ದರು’ ಎಂದು ಭಕ್ತರು ತಿಳಿಸಿದರು.
‘ವಿಶ್ವನಾಥ್ ಪೂರ್ವಾನುಮತಿ ಪಡೆಯದೆ ದೇವಾಲಯದ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆ. ಇದೀಗ ಅಶ್ವತ್ಥಕಟ್ಟೆಯಲ್ಲಿನ ಮರದ ಕೊಂಬೆಗಳು ಮನೆಯ ಕಡೆಗೆ ವಾಲಿರುವುದರಿಂದ ವಿಶ್ವನಾಥ್ ಅವುಗಳನ್ನು ಕಡಿಯಲು ಯತ್ನಿಸುತ್ತಿದ್ದಾರೆ. ಕಾನೂನುಬಾಹಿರವಾಗಿ ಸಾರ್ವಜನಿಕ ಆಸ್ತಿಯಲ್ಲಿ ಮನೆ ಕಟ್ಟಿರುವುದಲ್ಲದೆ ಮರ ನಾಶ ಮಾಡಲು ಮುಂದಾಗಿದ್ದಾರೆ’ ಎಂದು ಕೆಜಿಎಫ್ ನಿವಾಸಿ ವಿ.ರಾಜಶೇಖರ್ ದೂರಿದರು.
‘ಮರದ ಕೊಂಬೆ ಕಡಿಯಲು ವಿಶ್ವನಾಥ್ ಅವರಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಜತೆಗೆ ಅವರು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಿ ದೇವಸ್ಥಾನದ ಆಸ್ತಿ ಉಳಿಸಬೇಕು. ಸರ್ಕಾರಿ ಆಸ್ತಿ ಒತ್ತುವರಿ ಮಾಡಿರುವ ವಿಶ್ವನಾಥ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಭಕ್ತರು ಮನವಿ ಮಾಡಿದರು.