ಕೋಲಾರ: 'ಜೆಡಿಎಸ್ ಶಾಸಕರಾದ ಸಮೃದ್ಧಿ ಮಂಜುನಾಥ್ (ಮುಳಬಾಗಿಲು) ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ (ಶ್ರೀನಿವಾಸಪುರ) ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ. ಈ ಸಂಬಂಧ ಪಕ್ಷದ ಹಿರಿಯ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ' ಎಂದು ಕೋಲಾರ ಶಾಸಕ, ಕಾಂಗ್ರೆಸ್ನ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಈಗಾಗಲೇ ಇಬ್ಬರನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಕರೆದುಕೊಂಡು ಹೋಗಿ ಮಾತನಾಡಿಸಲಾಗಿದೆ. ಅಲ್ಲದೇ ಇಬ್ಬರೂ ಪಕ್ಷ ಸೇರಲಿದ್ದು, ತಮ್ಮ ಅಭಿಪ್ರಾಯ ಏನು ಎಂಬುದಾಗಿ ರಮೇಶ್ ಕುಮಾರ್ ಬಳಿಯೂ ಶಿವಕುಮಾರ್ ಕೇಳಿದ್ದಾರೆ. ನನ್ನನ್ನೂ ಕೇಳಿದ್ದು, ನಾನು ಸ್ವಾಗತಿಸುವುದಾಗಿ ಹೇಳಿದ್ದೇನೆ. ಲೋಕಸಭೆ ಚುನಾವಣೆಗೆ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೆ ಒಳ್ಳೆಯದು' ಎಂದರು.
'ಶ್ರೀನಿವಾಸಪುರ ಕ್ಷೇತ್ರದ ಉಪಚುನಾವಣೆ ನಡೆದರೆ ವೆಂಕಟಶಿವಾರೆಡ್ಡಿ ಅವರಿಗೆ ಸೂಚಕರಾಗಿ ರಮೇಶ್ ಕುಮಾರ್ ಸಹಿ ಹಾಕಲಿದ್ದಾರೆ. ಮುಳಬಾಗಿಲಿನಲ್ಲಿ ನಾನು ಸಮೃದ್ಧಿ ಮಂಜುನಾಥ್ ಅವರಿಗೆ ಸೂಚಕನಾಗುತ್ತೇನೆ' ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ನ ಎಂ.ಎಲ್.ಅನಿಲ್ ಕುಮಾರ್ ಕೂಡ ಇದೇ ವಿಚಾರ ತಿಳಿಸಿದರು.