ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಜೇಂದ್ರಗಡ: ರೊಟ್ಟಿ, ಎಳ್ಳು, ಬೆಲ್ಲ ಹಂಚಿ ಸಂಕ್ರಾಂತಿ ಆಚರಣೆ

Published 15 ಜನವರಿ 2024, 14:19 IST
Last Updated 15 ಜನವರಿ 2024, 14:19 IST
ಅಕ್ಷರ ಗಾತ್ರ

ಗಜೇಂದ್ರಗಡ: ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥವನ್ನು ಬದಲಿಸುವ ಸಂಕ್ರಾಂತಿ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಸೋಮವಾರ ಸಡಗರದಿಂದ ಆಚರಿಸಲಾಯಿತು.

ಬೆಳಿಗ್ಗೆ ಮನೆಯ ಸದಸ್ಯರೆಲ್ಲ ಎಳ್ಳು, ಅರಿಶಿಣದ ಮಿಶ್ರಣವನ್ನು ಮೈಗೆಲ್ಲ ಹಚ್ಚಿಕೊಂಡು ಸ್ನಾನ ಮಾಡಿ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಯುವಕರು ಗೆಳೆಯರೊಂದಿಗೆ ಪುಣ್ಯ ಕ್ಷೇತ್ರಗಳಿಗೆ ತೆರಳಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ಸಹ ಭೋಜನ ಸವಿದರು.

ಸಮೀಪದ ಕಾಲಕಾಲೇಶ್ವರ, ಕಣವಿ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ಭಕ್ತರು ದೇವರ ದರ್ಶನ ಪಡೆದರು. ಹಳ್ಳಿಗಳಲ್ಲಿ ಬೆಳಿಗ್ಗೆ ಮಹಿಳೆಯರು ಸಜ್ಜಿ ಮತ್ತು ಜೋಳದ ರೊಟ್ಟಿಯಲ್ಲಿ ಕಾಳು ಪಲ್ಯ, ಶೇಂಗಾ ಚಟ್ನಿ, ಹಸಿ ತರಕಾರಿ, ಭರತ ಇನ್ನಿತರ ಪದಾರ್ಥಗಳನ್ನಿಟ್ಟು ಮನೆ ಮನೆಗೆ ತೆರಳಿ ಪರಸ್ಪರ ರೊಟ್ಟಿ ಹಂಚಿಕೊಂಡರು. ಮಕ್ಕಳು ಎಳ್ಳು ಬೆಲ್ಲವನ್ನು ಪರಸ್ಪರ ಹಂಚಿಕೊಂಡು ಶುಭ ಕೋರಿದರು.

ಸಂಕ್ರಾಂತಿಗೆ ವಿಶೇಷ ಪೂಜೆ: ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದಿರುವ ಸಮೀಪದ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ದೇವಸ್ಥಾನದಲ್ಲಿ ಲಿಂಗರೂಪಿಯಾದ ಕಾಲಕಾಲೇಶ್ವರನಿಗೆ ಬೆಳಿಗ್ಗೆ ತೈಲಾಭ್ಯಂಗ, ಎಳ್ಳು, ಹರಿದ್ರಾ (ಅರಿಶಿಣ) ಮಿಶ್ರಿತ ಜಲದಿಂದ ಸ್ನಾನ, ನಂತರ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಅಲಂಕಾರ ಸೇವೆ ನಡೆಯಿತು. ನಂತರ ದರ್ಶನಕ್ಕೆ ಬಂದ ಭಕ್ತರಿಗೆ ಎಳ್ಳು, ಬೆಲ್ಲದ ನೈವೇದ್ಯ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT