ಶ್ರೀನಿವಾಸಪುರ: ಪಟ್ಟಣದಲ್ಲಿ ಭಾನುವಾರ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಇದೇ ಮೊದಲ ಬಾರಿಗೆ ಪಟ್ಟಣದಾದ್ಯಂತ ನಾಗರಿಕ ಸಂಚಾರ ಸಂಪೂರ್ಣ ಸ್ಥಗಿಗೊಂಡಿತ್ತು.
ಯಾರೊಬ್ಬರೂ ಮನೆಯಿಂದ ಹೊರಗೆ ಬರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಪಟ್ಟಣ ಜನರಹಿತವಾಗಿರುವಂತೆ ಕಂಡುಬಂದಿತು.
ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಸಂಪೂರ್ಣ ಮುಚ್ಚಲಾಗಿತ್ತು. ಎಪಿಎಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಬಸ್ ಹಾಗೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಆಟೋಗಳು ರಸ್ತೆಗೆ ಇಳಿಯಲಿಲ್ಲ. ಯಾವುದೇ ವಾಹನ ಸಂಚಾರ ಇರಲಿಲ್ಲ.
ತಾಲ್ಲೂಕಿನ ರಾಯಲ್ಪಾಡು, ಗೌನಿಪಲ್ಲಿ, ರೋಣೂರು, ಯಲ್ದೂರು ಹಾಗೂ ರೋಜೇನಹಳ್ಳಿ ಕ್ರಾಸ್ನಲ್ಲಿ ಪ್ರಧಾನಿ ಮೋದಿ ಅವರ ಮನವಿಗೆ ಸ್ಪಂದಿಸಿ ಜನತಾ ಕರ್ಫ್ಯೂ ಆಚರಿಸಲಾಯಿತು. ಈ ಎಲ್ಲ ಕಡೆ ಅಂಗಡಿಗಳನ್ನು ಮುಚ್ಚಲಾಗಿತ್ತು. ಜನರು ಮನೆಗಳಲ್ಲಿಯೇ ಉಳಿದರು.
ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಾಹನ ಸಂಚಾರ ಹೊರತುಪಡಿಸಿ ಜನ ಜೀವನ ಸಾಮಾನ್ಯವಾಗಿತ್ತು. ಜನರು ಕೃಷಿ ಚಟುವಟಿಕೆ ಹಾಗೂ ಜಾನುವಾರು ಪಾಲನೆಯಲ್ಲಿ ತೊಡಗಿದ್ದರು. ಆದರೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಜನ ಸಂಚಾರ ಸ್ಥಗಿತಗೊಂಡಿತ್ತು.
ಸಂಜೆ 5 ಗಂಟೆಗೆ ಸರಿಯಾಗಿ ನಾಗರಿಕರು ಚಪ್ಪಾಳೆ ತಟ್ಟುವುದರ ಮೂಲಕ, ಗಂಟೆ ಹಾಗೂ ಜಾಗಟೆ ಬಾರಿಸುವುದರ ಮೂಲಕ ಕರೊನಾ ವಿರುದ್ಧ ಶ್ರಮಿಸುತ್ತಿರುವ ಸಿಬ್ಬಂದಿಗೆ ಗೌರವ ಸೂಚಿಸಿದರು.