ಶ್ರೀನಿವಾಸಪುರ: ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ವಿದ್ಯಾರ್ಥಿ ಕೆ.ರಾಕೇಶ್ ಸಾವಿನ ಪ್ರಕರಣಕ್ಕೆ ಎರಡು ದಲಿತ ಸಮುದಾಯಗಳ ಮಧ್ಯೆ ಸಂಘರ್ಷದ ಬಣ್ಣ ಕಟ್ಟುವುದು ಸರಿಯಲ್ಲ. ಜಿಲ್ಲೆಯ ಹೊರಗಿನ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಂತಹ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ನಾಗನಾಳ ಮುನಿಯಪ್ಪ ಹೇಳಿದರು.
ಪಟ್ಟದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ದಲಿತ ಸಂಘರ್ಷ ಸಮಿತಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಯ ಸಾವು ನೋವಿನ ಸಂಗತಿಯಾಗಿದೆ. ಆದರೆ ಮರಣೋತ್ತರ ಪರೀಕ್ಷಾ ವರದಿ ಬರುವ ಮುನ್ನ ಕೊಲೆ ಅಥವಾ ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ಪ್ರಕರಣ ಖಂಡಿಸಿ ಜುಲೈ 31 ರಂದು ನಡೆಯಲಿರುವ ಕಾಲ್ನಡಿಗೆ ಜಾಥಾವನ್ನು ದಸಂಸ ಬೆಂಬಲಿಸುತ್ತದೆ ಎಂದು ಹೇಳಿದರು.
ಪ್ರಕರಣ ಸೂಕ್ಷ್ಮವಾಗಿದ್ದರೂ ಈ ಬಗ್ಗೆ ಜಿಲ್ಲಾಡಳಿ ಮೌನವಹಿಸಿರುವುದು ಸರಿಯಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೃತ ರಾಕೇಶ್ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಗುಪ್ತಚಾರ ವಿಭಾಗ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರೆ ಬಾಲಕನ ಸಾವು ಸಂಭವಿಸುತ್ತಿರಲಿಲ್ಲ. ಶ್ರೀನಿವಾಸಪುರ, ಗೌನಿಪಲ್ಲಿ ಹಾಗೂ ರಾಯಲ್ಪಾಡ್ ಪೊಲೀಸ್ ಠಾಣಾ ವ್ಯಾಪ್ತಿ ಅತ್ಯಂತ ಸೂಕ್ಷ ಪ್ರದೇಶವಾಗಿದ್ದು, ಇಲ್ಲಿ ಗುಪ್ತಚರ ವಿಭಾಗವನ್ನು ಬಲಪಡಿಸಬೇಕು ಎಂದು ಹೇಳಿದರು.
ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ರಾಕೇಶ್ ಕೊಲೆ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎದ್ದುಕಾಣುತ್ತದೆ. ಗಲಾಟೆ ನಡೆದ ಕೂಡಲೆ ಕ್ರಮ ಕೈಗೊಂಡಿದ್ದರೆ ಈಗಿನ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ಅದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದನ್ನು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಹೇಳಿದರು.
ತಾಲ್ಲೂಕು ದಸಂಸ ಘಟಕದ ಸಂಚಾಲಕ ಕೂತ್ಸಂದ್ರ ರೆಡ್ಡಪ್ಪ, ವೆಂಕಟರವಣಪ್ಪ, ಎಚ್.ಮುನಿಚೌಡಪ್ಪ, ಮರಸನಪಲ್ಲಿ ವೆಂಕಟರಾಮಪ್ಪ, ಜಿ.ವಿ.ವೆಂಕಟರಮಣಪ್ಪ, ಚೌಡೇನಹಳ್ಳಿ ವಿಜಿ, ಎಸ್.ಎಂ.ವೆಂಕಟೇಶ್, ಕೇಶವ, ಗೋವಿಂದರಾಜು, ನರಸಿಂಹ, ಮೇಶ್ ವೆಂಕಟರವಣ ನಾಯಕ್, ಕೋಡಿಪಲ್ಲಿ ನರಸಿಂಹ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.