ಮುಳಬಾಗಿಲು: ತಾಲ್ಲೂಕಿನಲ್ಲಿ ಕಳಪೆ ಬಿತ್ತನೆ ಆಲೂಗಡ್ಡೆ ನಾಟಿ ಮಾಡಿ ಫಸಲು ಬಾರದೆ ಸಂಕಷ್ಟ ಅನುಭವಿಸುತ್ತಿರುವ ರೈತರ ತೋಟಗಳಿಗೆ ಸೋಮವಾರ ಶಾಸಕರು ಹಾಗೂ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಸೀಗೇನಹಳ್ಳಿ, ಮಜರಾ ಅತ್ತಿಕುಂಟೆ, ರಾಮರಾಯನ ಕೋಟೆ, ತಿರುಮನಹಳ್ಳಿ, ಗೊಟ್ಟಕುಂಟೆ, ಎಮ್ಮೇನತ್ತ, ಕನ್ನಸಂದ್ರ ಮುಂತಾದ ಕಡೆ ನೂರಾರು ಎಕರೆ ಪ್ರದೇಶದಲ್ಲಿ ಕಳಪೆ ಆಲೂಗಡ್ಡೆ ಬಿತ್ತನೆಯಿಂದ ಫಸಲಿಲ್ಲದೆ ಕೇವಲ ಗಿಡಗಳಲ್ಲಿ ಬೇರು ಮಾತ್ರ ಬಿಟ್ಟಿದೆ.
ಇತ್ತೀಚೆಗೆ ಆಲೂಗಡ್ಡೆ ಬೆಳೆದ ರೈತರು ಕಂಗಾಲು ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದನ್ನು ತಿಳಿದು ಶಾಸಕ ಸಮೃದ್ದಿ ಮಂಜುನಾಥ್ ಮತ್ತು ವಿಜ್ಞಾನಿಗಳಾದ ಸಚ್ಚಿದಾನಂದ ಮುಶ್ರಫ್, ಕೆ.ಎಂ ಆಶಾ ಹಾಗೂ ತೋಟಗಾರಿಕಾ ಅಧಿಕಾರಿಗಳು ಸೀಗೇನಹಳ್ಳಿ ಸಮೀಪದ ಆಲೂಗಡ್ಡೆ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ, ತಾಲ್ಲೂಕಿನಲ್ಲಿ ಕೆಲವು ಕಡೆ ರೈತರು ಆಲೂಗಡ್ಡೆ ಬಿತ್ತನೆ ಮಾಡಿದ್ದರೂ ಫಸಲು ಬಂದಿಲ್ಲ. ಇದಕ್ಕೆ ಅಂತರ್ಜಲ, ಭೂಮಿ ಅಥವಾ ಬಿತ್ತನೆ ಗಡ್ಡೆಗಳ ಕಾರಣ ಇರಬಹುದೇ ಎಂದು ತಿಳಿದು ಬರುತ್ತಿಲ್ಲ. ಆದರೆ ಈ ಬಾರಿ ಫಸಲು ಬರದೆ ಇರಲು ಕಾರಣ ಏನೆಂದು ವಿಜ್ಞಾನಿಗಳ ತಂಡ ಕಂಡು ಹಿಡಿಯಲಿದ್ದಾರೆ ಎಂದರು.
ತಹಶೀಲ್ದಾರ್ 2 ಬಿ.ಆರ್.ಮುನಿವೆಂಕಟಪ್ಪ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರಮೇಶ್, ಸಹಾಯಕ ತೋಟಗಾರಿಕಾ ಅಧಿಕಾರಿ ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್.ಮುರಳಿ, ರಘುಪತಿ ರೆಡ್ಡಿ, ರೈತ ನಾರಾಯಣಪ್ಪ, ರಮೇಶ್, ಶಂಕರ್, ಗಂಗಾಧರ್ ಮುಂತಾದವರು ಇದ್ದರು.