ಮುಳಬಾಗಿಲು: ಕುಗ್ರಾಮದ ಈ ಬಡ ಪ್ರತಿಭೆ ಉದ್ಧ ಜಿಗಿತ ಹಾಗೂ ಎತ್ತರ ಜಿಗಿತದಲ್ಲಿ ಈಗಾಗಲೇ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಪದಕಗಳನ್ನು ಗೆದ್ದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ಆವಣಿ ಹೋಬಳಿ ಕೆಂಪಾಪುರ ಗ್ರಾಮದ ಕೆ.ವಿ.ಶಿವಮಣಿ ಗ್ರಾಮದ ಕೃಷಿಕರಾದ ವೆಂಕಟೇಶಪ್ಪ ಹಾಗೂ ಶಾಮಲಮ್ಮ ದಂಪತಿ ಪುತ್ರ. ಯಳಗೊಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾನೆ. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾನೆ. ಎತ್ತರ ಮತ್ತು ಉದ್ಧ ಜಿಗಿತದಲ್ಲಿ ರಾಜ್ಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಮೆಯಾಗಿದ್ದಾನೆ.
ಬಡ ಕೃಷಿಕ ದಂಪತಿಗೆ ಮಗನ ಕ್ರೀಡಾಸಕ್ತಿಗೆ ಅನುಗುಣವಾಗಿ ಆರ್ಥಿಕ ನೆರವು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದರೂ, ಕ್ರೀಡಾಸಕ್ತಿಯಿಂದಾಗಿ ಶಿವಮಣಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸುತ್ತಿದ್ದಾನೆ.
ಈಚೆಗೆ ಶಾಲಾ ಹಂತದಲ್ಲಿ ನಡೆದ ಕ್ರೀಡಾ ಕೂಟಗಳಲ್ಲಿ ಉದ್ದ ಮತ್ತು ಎತ್ತರದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ನಂತರ ವಿಭಾಗ ಮಟ್ಟದಲ್ಲಿಯೂ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈಚೆಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಕೋಲಾರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ನಡೆದ 17ವರ್ಷದೊಳಗಿನ ಜಿಲ್ಲಾ ಮಟ್ಟದ ಎತ್ತರ ಹಾಗೂ ಉದ್ಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಪದಕ ಹಾಗೂ ಪ್ರಮಾಣ ಪತ್ರ ಪಡೆದಿದ್ದಾನೆ. ಇದೇ ವರ್ಷ 2023-24ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದ 17ವರ್ಷದೊಳಗಿನ ಕ್ರೀಡಾ ಕೂಟದಲ್ಲಿಯೂ ಭಾಗವಹಿಸಿ ಎತ್ತರ ಹಾಗೂ ಉದ್ಧ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಯುವ ಪ್ರತಿಭೆಯನ್ನು ಗುರುತಿಸಿರುವ ರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಕೆ.ವಿ.ಶಿವಮಣಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿ ಪ್ರಸಕ್ತ ಗುಜರಾತಿನಲ್ಲಿ ನಡೆಯುತ್ತಿರುವ 17ವರ್ಷದೊಳಗಿನ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾ ಕೂಟಗಳಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಮಂಡಿಕಲ್ ಮಂಜುನಾಥ್, ನಿವೃತ್ತ ದೈಹಿಕ ಶಿಕ್ಷಕರು ಯುವ ಪ್ರತಿಭೆಗೆ ನೆರವು ನೀಡಿದ್ದಾರೆ.
Quote - ಎತ್ತರ ಹಾಗೂ ಉದ್ದ ಜಿಗಿತದಲ್ಲಿ ಆಸಕ್ತಿ ಇದೆ. ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ದಾನಿಗಳು ಹಾಗೂ ಸರ್ಕಾರ ಸಹಾಯ ಮತ್ತು ತರಬೇತಿ ನೀಡಿದರೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಬಯಕೆ ಇದೆ ಕೆ.ವಿ.ಶಿವಮಣಿ ಕ್ರೀಡಾಪಟು
Quote - ಯುವ ಪ್ರತಿಭೆ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಎಲ್ಲ ರೀತಿಯ ನೆರವು ನೀಡಲಾಗುವುದು. ಹೆಚ್ಚಿನ ತರಬೇತಿಗಾಗಿ ದಾನಿಗಳು ಈ ಬಡ ಪ್ರತಿಭೆ ನೆರವಿಗೆ ಬರಬೇಕಾಗಿದೆ ಮಂಡಿಕಲ್ ಮಂಜುನಾಥ್ ಮುಳಬಾಗಿಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.