ಕೋಲಾರ: ‘ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬೇಗನೇ ವಾಪಸ್ ಬರಬೇಕು. ತನಿಖೆಯಿಂದ ಹೆಚ್ಚು ದಿನ ತಪ್ಪಿಸಿಕೊಂಡು ಇರಲು ಆಗದು. ಎಲ್ಲೇ ಇದ್ದರೂ ಬಂದು ತನಿಖೆಗೆ ಸಹಕಾರ ನೀಡಬೇಕು’ ಎಂದು ಸಂಸದ ಡಿ.ವಿ.ಸದಾನಂದಗೌಡ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತನಿಖೆಗೆ ಹಾಜರಾಗದಿದ್ದರೆ ಸಂಶಯಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ತಮ್ಮ ಕುಟುಂಬದ ಅತ್ಯಂತ ಗೌರವಯುತ ರಾಜಕಾರಣಿಗೆ ಮುಜುಗರ ಉಂಟಾಗುತ್ತದೆ, ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಆಗಬಹುದು ಎಂಬುದನ್ನು ಅವರು ಮರೆಯಬಾರದು’ ಎಂದರು.
‘ಯಾವುದೇ ಪ್ರಕರಣ ತನಿಖೆ ಹಂತದಲ್ಲಿರುವಾಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಯಾರೂ ಮನಬಂದಂತೆ ಹೇಳಿಕೆ ನೀಡುತ್ತಾ ಇರಬಾರದು. ಇಲ್ಲದಿದ್ದರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದಂತಾಗಿ ತನಿಖೆಯ ದಿಕ್ಕು ತಪ್ಪುತ್ತದೆ’ ಎಂದು ಎಚ್ಚರಿಸಿದರು.