ಪ್ರಜಾವಾಣಿ ವಾರ್ತೆ
ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮಂಡಳಿಗೆ ಜ. 5ರಂದು ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವನ್ನು ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಮುನ್ನಡೆಸುವ ಉದ್ದೇಶದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಬಿಜೆಪಿ ಮುಖಂಡ ಬ್ಯಾಟರಂಗೇಗೌಡ ಇಲ್ಲಿ ಸೋಮವಾರ ತಿಳಿಸಿದರು.
ನಿರ್ದೇಶಕ ಮಂಡಳಿಗೆ ಜಿಲ್ಲೆಯಿಂದ ಇಬ್ಬರು ಆಯ್ಕೆ ಆಗಬೇಕಾಗಿದೆ. ಕಳೆದ 6 ತಿಂಗಳಿಂದ 15 ಸಾವಿರ ಮತದಾರರನ್ನು ಖುದ್ದು ಭೇಟಿ ಮಾಡಿ ಮತ ಯಾಚಿಸಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಒಕ್ಕಲಿಗರ ಸಂಘ ಸೇವಾ ಕ್ಷೇತ್ರ-ವಾಗಿದ್ದು, ಮತದಾರರು ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗುವುದಿಲ್ಲ ಎಂಬ ಭಾವನೆ ಇದೆ. ಚುನಾವಣೆಗಾಗಿ ಹಣ ಖರ್ಚು ಮಾಡುವವರಿಗೆ ನಿಜವಾಗಿಯೂ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಹಣವನ್ನು ಸಮಾಜಕ್ಕೆ ದಾನ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 20 ಸಾವಿರ ಮತದಾರರಿದ್ದು, ತುಮಕೂರು ನಗರದಲ್ಲಿ 5400, ಕುಣಿಗಲ್ 5700, ತುರುವೇಕೆರೆ 3400, ತಿಪಟೂರು 800, ಗುಬ್ಬಿ 1000, ಚಿಕ್ಕನಾಯಕನಹಳ್ಳಿ 45, ಶಿರಾ 550, ಮಧುಗಿರಿ 1600, ಕೊರಟಗೆರೆ 1200, ಪಾವಗಡದಲ್ಲಿ 80 ಮತದಾರರು ಇದ್ದಾರೆ.