ಹನುಮಸಾಗರ: ಗಂಧದ ಕಟ್ಟಿಗೆ ತುಂಡುಗಳನ್ನು ಕಳವು ಮಾಡಿಕೊಂಡು ಹೋಗುತ್ತಿದ್ದ ಕಳ್ಳರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಕಂದಗಲ್ಲ ಗ್ರಾಮದ ಬಸಪ್ಪ ಬಾಬು ಅರಣ್ಯಶಿಕಾರಿ, ಈಶ್ವರ ಬಾಬು ಅರಣ್ಯಶಿಕಾರಿ ಬಂಧಿತರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅವರಲ್ಲಿದ್ದ ಗಂಧದ ತುಂಡುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹನುಮಸಾಗರದ ರಾಜೇಸಾಬ ಲಬ್ಬೇರ ಎನ್ನುವವರ ಹೊಲದ ಬಳಿ ಹಳ್ಳದಲ್ಲಿ ನೈಸರ್ಗಿಕವಾಗಿ ಗಂಧದ ಮರ ಬೆಳೆದಿತ್ತು. ಕಳ್ಳರು ಅದನ್ನು ಅಕ್ರಮವಾಗಿ ಕಡಿದು ಮೂರು ತುಂಡುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಠಾತ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಅನ್ವರ್, ಉಪವಲಯ ಅರಣ್ಯಾಧಿಕಾರಿ ಹನುಮಂತ, ಮಹಮ್ಮದ್ ರಿಯಾಜ್, ಶಿವಶಂಕರ, ಅರಣ್ಯ ರಕ್ಷಕ ದಾನನಗೌಡ ಮಾಲಿಪಾಟೀಲ, ಮಲ್ಲಿಕಾರ್ಜುನ, ಅರಣ್ಯ ಸಿಬ್ಬಂದಿಗಳಾದ ನೀಲಪ್ಪ ಕುದರಿ, ಭಾಗ್ಯವಂತ, ರಮೇಶ ಹಾಗೂ ಮಳಿಯಪ್ಪ ಇದ್ದರು.