ಗಂಗಾವತಿ: ಯುವಕರಿಗೆ ಡಿಜಿಟಲ್ ಇ-ಗ್ರಂಥಾಲಯ, ಶಾಲಾ ಮಕ್ಕಳಿಗೆ ಹ್ಯಾಂಡ್ ರೈಡ್ ಕಂಪ್ಯೂಟರ್, ರೈತರಿಗೆ, ಸಾರ್ವಜನಿಕರಿಗೆ ದಿನಪತ್ರಿಕೆ, ಹಿರಿಯರಿಗೆ ಕಥೆ, ಕಾದಂಬರಿಗಳ ಪುಸ್ತಕ ಸೌಲಭ್ಯ ಸೇರಿ ಹಲವು ವೈಶಿಷ್ಟ್ಯಗಳೊಂದಿಗೆ ಓದುಗರನ್ನು ಕೈಬೀಸಿ ಕರೆಯುತ್ತಿದೆ ಇಲ್ಲೊಂದು ಗ್ರಾಮ ಪಂಚಾಯಿತಿ ಗ್ರಂಥಾಲಯ.
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಪ್ರಾಚೀನ ಗಗನಮಹಲ್ ಬಳಿ ಇರುವ ಈ ಗ್ರಂಥಾಲಯವು ಎಲ್ಲರ ಗಮನ ಸೆಳೆಯುತ್ತಿದೆ.
ಆನೆಗೊಂದಿ ಗ್ರಾಮದ ಅರಿವಿನ ಗ್ರಂಥಾಲಯವು ಹಳೆಯ ಕಟ್ಟಡದಲ್ಲಿದ್ದರೂ ಇಲ್ಲಿ ಸೌಲಭ್ಯಗಳೇನೂ ಕಡಿಮೆಯಿಲ್ಲ. ನಿಶ್ಯಬ್ದ ವಾತಾವರಣ, ಓದುಗರಿಗೆ ಕೂಡಲು ಸುಸಜ್ಜಿತ ಕುರ್ಚಿ, ಕುಡಿಯುಲು ಶುದ್ಧ ನೀರು, ನೆಲದ ಮೇಲೆ ಕುಳಿತು ಓದುವುದಾದರೆ ಚಾಪೆ ವ್ಯವಸ್ಥೆ, ವೈಫೈ, ವಿದ್ಯುತ್ ಸೌಲಭ್ಯ, ದಿನಪತ್ರಿಕೆ ಸೇರಿ ಓದಲು ಪುಸ್ತಕಗಳಿಗೆ ಕೊರತೆಯೇ ಇಲ್ಲ.
ಈ ಗ್ರಂಥಾಲಯದ ಗ್ರಂಥಪಾಲಕ ವಿಶೇಷವಾಗಿ ಶಾಲಾ ಮಕ್ಕಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಗ್ರಾಮ ಡಿಜಿ ವಿಕಸನದಡಿ ಪ್ರತಿ ಶನಿವಾರ ಹಾಗೂ ಬಿಡುವಿನ ವೇಳೆಯಲ್ಲೆಲ್ಲ ಚಿತ್ರಕಲೆ, ಕೌಶಲ, ಕಂಪ್ಯೂಟರ್ ಬಳಕೆ ಮಾಡುವ ವಿಧಾನ, ಟೈಪಿಂಗ್, ರಸ್ತೆ ಸಂಚಾರ ನಿಯಮ, ನೃತ್ಯ, ಹಾಡು, ಗಣಿತ ವಿಷಯದ ಲೆಕ್ಕಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಮಕ್ಕಳ ಶೈಕ್ಷಣಿಕ ಜಾಗೃತಿಗಾಗಿ ಎಸ್ಸೆಸ್ಸೆಲ್ಸಿ ನಂತರ ಯಾವ ಶಿಕ್ಷಣದಿಂದ ಏನಾಗಬಹುದು ಎಂಬುದರ ಬಗ್ಗೆ ಇಂಡಿಯನ್ ಲಿಟ್ರೆಸಿ ಪ್ರೊಜೆಕ್ಟ್ ಬ್ಯಾನರ್, ಭಾರತ, ಕರ್ನಾಟಕ ನಕಾಶೆ, ಅಂಗವಿಕಲರಿಗೆ ಸನ್ನೆಗಳ ಬ್ಯಾನರ್, ಬಾಲ್ಯವಿವಾಹ ನಿಷೇಧ, ಸಮೂಹ ಸಾಮರ್ಥ್ಯ, ಸಾಮಾಜಿಕ ವರ್ತನೆ ಸೇರಿ ಹಲವು ಜಾಗೃತಿ ಕುರಿತು ಮಾಹಿತಿಯನ್ನು ಗೋಡೆಯಲ್ಲಿ ಅಳವಡಿಸಲಾಗಿದೆ.
ಗ್ರಂಥಾಲಯದಲ್ಲಿ ಏನೇನಿದೆ
ಮೂರು ಹ್ಯಾಂಡ್ರೈಡ್ ಕಂಪ್ಯೂಟರ್, 2 ಸಾಮಾನ್ಯ ಕಂಪ್ಯೂಟರ್, 1 ಟಿವಿ, ಎರಡು ಮೊಬೈಲ್, ಒಂದು ಲ್ಯಾಪ್ಟಾಪ್, ಕಥೆ, ಕವನ, ಕಾದಂಬರಿ, ಸಾಮಾನ್ಯಜ್ಞಾನ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಸೇರಿ 15,000 ಪುಸ್ತಕಗಳು ಇ-ಗ್ರಂಥಾಲಯದಲ್ಲಿ ಲಭ್ಯ ಇವೆ. ಓದುಗರನ್ನು ಸೆಳೆಯಲು ಗೋಡೆಗಳಿಗೆ ಬರೆಯಲಾದ ಪುಸ್ತಕ ಕುರಿತ ಜ್ಞಾನಿಗಳ ನುಡಿಗಳು ಆಕರ್ಷಣೀಯವಾಗಿವೆ.
ಯಾವೆಲ್ಲ ಪುಸ್ತಕಗಳು ಲಭ್ಯವಿವೆ
ಕಥೆ, ಕಾದಂಬರಿ, ಕವನ, ಇತಿಹಾಸ, ಮಕ್ಕಳ ಕಥೆ, ಸಾಮಾನ್ಯಜ್ಞಾನ, ವಿಜ್ಞಾನ, ಲೆಕ್ಕಶಾಸ್ತ್ರ, ಕರಕುಶಲ ಕಲೆ, ಜಾನಪದಕಲೆ, ವಿಚಾರ ಸಂಕಿರಣ, ಆರೋಗ್ಯ, ಡಿಸೈನ್, ಸೌಂದರ್ಯ, ಸ್ಪರ್ಧಾತ್ಮಕ ಪರೀಕ್ಷೆ, ಎಂಜಿನಿಯರಿಂಗ್ ಸೇರಿ ಇತರೆ ವಿಷಯ ಕುರಿತ ಕನ್ನಡ, ತೆಲುಗು, ಇಂಗ್ಲಿಷ್ ಭಾಷೆಯ 6,500 ಹೆಚ್ಚು ಪುಸ್ತಕಗಳನ್ನು ಈ ಗ್ರಂಥಾಲಯದಲ್ಲಿ ಓರಣವಾಗಿ ಜೋಡಿಸಲಾಗಿದೆ. ಇಲ್ಲಿ 1,295 ಓದುಗರು ಸದಸತ್ವ ಪಡೆದಿದ್ದಾರೆ.
ವಿದೇಶಿಗರಿಂದ ಮಕ್ಕಳಿಗೆ ಜಾಗೃತಿ
ಆನೆಗೊಂದಿ ಗ್ರಂಥಾಲಯಲಕ್ಕೆ ಈವರೆಗೆ ಜರ್ಮನಿ, ಇಂಗ್ಲೆಂಡ್, ಮೆಕ್ಸಿಕೋ, ಆಸ್ಟ್ರಿಯಾ, ಸ್ಪೇನ್ ದೇಶದ ಪ್ರಜೆಗಳು ಭೇಟಿ, ಮಕ್ಕಳಿಗೆ, ಗ್ರಂಥಪಾಲಕರಿಗೆ ಗ್ರಂಥಾಲಯ ಬಳಕೆ ಬಗ್ಗೆ, ಶಿಕ್ಷಣ ಮಾಹಿತಿ ನೀಡಿದ್ದಾರೆ. ಹಾಗೆಯೇ ಸ್ಥಳೀಯ ಇತಿಹಾಸ ಮಾರ್ಗದರ್ಶಿಗಳು ಸಹ ಬಿಡುವಿನ ವೇಳೆ ಗ್ರಂಥಾಲಯಕ್ಕೆ ಭೇಟಿ ನೀಡಿ ಮಕ್ಕಳಿಗೆ ವಿಜಯನಗರ ಸಾಮ್ರಾಜ್ಯದ ಇತಿಹಾಸ, ಇಲ್ಲಿನ ಹಕ್ಕಿಗಳ ಬಗ್ಗೆ ಮಾಹಿತಿ ನೀಡುತ್ತಾರೆ.
ಗ್ರಂಥಾಲಯಕ್ಕೆ ಭೇಟಿ ನೀಡಿದ ಗಣ್ಯರು ತಮ್ಮ ಅನಿಸಿಕೆ, ಸಲಹೆ, ದೂರು ದಾಖಲಿಸಲು ಇಲ್ಲಿ ಸಂದರ್ಶಕರ ಪುಸ್ತಕ ಇಡಲಾಗಿದ್ದು,ಈ ದಾಖಲಾಗುವ ಸಲಹೆ ಹಾಗೂ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಕೆಲಸ ಮಾಡಲಾಗುತ್ತಿದೆ.
ಕಳೆದ 32 ವರ್ಷಗಳಿಂದ ಗ್ರಂಥಾಲಯದಲ್ಲಿ ಓದುಗರಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಂಶೋಧನಾ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವಿಜಯನಗರ ಕಾಲದ ಇತಿಹಾಸ ಪುಸ್ತಕಗಳ ಬೇಡಿಕೆ ಹೆಚ್ಚಿದೆ. ಜಿಲ್ಲಾಡಳಿತವು ಈ ಪುಸ್ತಕಗಳ ಪೂರೈಕೆಗೆ ವ್ಯವಸ್ಥೆ ಮಾಡಬೇಕು.ವೆಂಕಟೇಶ, ಗ್ರಂಥಪಾಲಕ, ಆನೆಗೊಂದಿ ಗ್ರಂಥಾಲಯ
ಆನೆಗೊಂದಿ ಗ್ರಾಮ ಪಂಚಾಯಿತಿ ಗ್ರಂಥಾಲಯ 1991ರಲ್ಲಿ ಆರಂಭವಾಗಿ ಈವರಗೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಗ್ರಾಮದಲ್ಲಿ 1600 ಶಾಸನಗಳಿರುವುದು ಪುರಾತತ್ವ ಶಾಸ್ತ್ರ ಇಲಾಖೆ ಗುರುತಿಸಿದ್ದು ಇಲ್ಲಿ ಸ್ಥಳೀಯ ಹಾಗೂ ವಿಜಯನಗರ ಕಾಲದ ಇತಿಹಾಸ ತಿಳಿಯಲು ಮಾಹಿತಿ ಕೇಂದ್ರ ನಿರ್ಮಾಣ ಆಗಬೇಕು.ಪದ್ಮನಾಭರಾಜು, ಓದುಗ, ಆನೆಗೊಂದಿ ಗ್ರಾಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.