ಕಾರಟಗಿ: ಪುಸ್ತಕ ಓದುವ ಅಭ್ಯಾಸದಿಂದ ಜ್ಞಾನದ ಸಂಪಾದನೆ ಜತೆಗೆ ಬೌದ್ಧಿಕವಾಗಿ ಬೆಳವಣಿಗೆಯಾಗಲು ಸಾಧ್ಯ ಎಂದು ಸಹಾಯಕ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಹೇಳಿದರು.
ಪಟ್ಟಣದ ಕಸ್ತೂರ ಬಾ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಾಣ-ಜಾಣೆಯರ ಬಳಗದ ಸಹಯೋಗದಲ್ಲಿ ಶುಕ್ರವಾರ ನಡೆದ ಪುಸ್ತಕ ಕರಡಚ್ಚು ತಿದ್ದುವಿಕೆ ಕಮ್ಮಟ ಮತ್ತು ಪ್ರಕಾಶಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಬೇರೆ ಹವ್ಯಾಸದ ಬದಲು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಮಹ್ಮದ್ ರಫಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಕನ್ನಡಪುಸ್ತಕಗಳ ಪ್ರಕಟಣೆಗೆ ಅನೇಕ ಸವಾಲುಗಳಿವೆ. ಅವನ್ನು ಮೆಟ್ಟಿ ನಿಲ್ಲುವ ಕೆಲಸವನ್ನು ಪ್ರಕಾಶಕರು ಮಾಡುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಕ ಬಸವರಾಜ, ಪ್ರಾಚಾರ್ಯ ಡಾ. ಬಸವರಾಜ ಬಳಿಗಾರ ಮಾತನಾಡಿದರು.ಉಪನ್ಯಾಸಕರಾದ ಮಹಾದೇವಿ, ಅನಸೂಯಾ, ಶಶಿಕಲಾ, ಜಾಣ-ಜಾಣೆಯರ ಬಳಗದ ಅಪರ್ಣಾ ಇದ್ದರು.