ಗಂಗಾವತಿ (ಕೊಪ್ಪಳ ಜಿಲ್ಲೆ): ‘ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಹಿಂದೂಗಳನ್ನು ಹೊರತುಪಡಿಸಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಹಿಂದೂ ಜಾಗರಣ ವೇದಿಕೆ ಬೆಟ್ಟದ ಸಮೀಪ ಹಾಕಿದ್ದ ಫಲಕಗಳನ್ನು ಗಂಗಾವತಿ ತಾಲ್ಲೂಕು ಆಡಳಿತ ಮಂಗಳವಾರ ತೆರವುಗೊಳಿಸಿದೆ.
‘ಅಂಜನಾದ್ರಿ ಸುತ್ತಲೂ ವ್ಯಾಪಾರ ಮಾಡುವ ಜಾಗ ಖಾಸಗಿಯವರಿಗೆ ಸೇರಿದ್ದು ಅನುಮತಿ ನೀಡುವುದು, ಬಿಡುವುದು ಅಲ್ಲಿನ ಮಾಲೀಕರಿಗೆ ಬಿಟ್ಟ ವಿಚಾರ’ ಎಂದು ಗಂಗಾವತಿ ತಹಶೀಲ್ದಾರ್ ಯು. ನಾಗರಾಜ್ ತಿಳಿಸಿದರು.
ಜಾಗರಣಾ ವೇದಿಕೆ ನಡೆ ಖಂಡಿಸಿ ಮಂಗಳವಾರ ಸಿಪಿಐಎಂ ತಾಲ್ಲೂಕು ಸಮಿತಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
‘ಹಿಂದೂ ಜಾಗರಣ ವೇದಿಕೆ ಅಂಜನಾದ್ರಿ ಬೆಟ್ಟದಲ್ಲಿ ಬೇರೆ ಧರ್ಮದ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಆಗ್ರಹ ಮಾಡಿದ್ದು ಪ್ರಜಾಪ್ರಭುತ್ವ ನೀತಿಗೆ ವಿರೋಧವಾಗಿದೆ. ಇದು ಕೋಮುಗಲಭೆ ಸೃಷ್ಟಿಸುವ ತಂತ್ರ’ ಎಂದು ಸಿಪಿಐಎಂ ಜಿಲ್ಲಾ ಘಟಕದ ಅಧ್ಯಕ್ಷ ನಿರುಪಾದಿ ಬೆಣಕಲ್ ಆರೋಪಿಸಿದರು