ಗಂಗಾವತಿ: ಕೊಪ್ಪಳ ಜಿಲ್ಲೆಯ ಗಿಣಿಗೇರಾ ಗ್ರಾಮದಿಂದ ಆಂಧ್ರಪ್ರದೇಶದ ಆಲೂರಿಗೆ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ 16 ಎತ್ತುಗಳನ್ನು ಒಳಗೊಂಡ ಅಶೋಕ್ ಲೇಲ್ಯಾಂಡ್ ವಾಹನ ಮೇಲೆ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ, ಎತ್ತುಗಳನ್ನು ರಕ್ಷಿಸಿದ ಘಟನೆ ಈಚೆಗೆ ನಡೆದಿದೆ.
ಜಾನುವಾರು ಸಾಗಿಸುತ್ತಿದ್ದ ಆರೋಪಿಗಳನ್ನು ಕರ್ನೂಲು ಜಿಲ್ಲೆ ಆಲೂರು ಮಂಡಲ ಸೀನಹೊತೂರಿನ ಚಾಲಕ ರಘುವೀರ್, ತುಮಿಳಿಬೀಡು ಗ್ರಾಮದ ರಾಮಾಂಜನೇಯ, ಶೇಖಣ್ಣ ತಹಶೀಲ್ದಾರ್, ರಾಯಪ್ಪ, ಹಂಪಾ ಮುದಕಿರಿ ಗ್ರಾಮದ ಆಂಜನೇಯ, ಪೆದ್ದ ಹೂತೂರಿನ ಹುಚ್ಚೀರಪ್ಪ, ವೈಕುಂಠ, ಟಿ. ಹುಚೀರಪ್ಪ ಎಂದು ಗುರುತಿಸಲಾಗಿದೆ.
ಘಟನೆ ಏನು?: ಗಂಗಾವತಿ ತಾಲ್ಲೂಕಿನ ವಿರೂಪಾಪುರ ಗಡ್ಡೆ ಬಳಿನ ಕಿಷ್ಕಿಂದಾ ರೆಸಾರ್ಟ್ ಬಳಿ ಪೊಲೀಸರು ಪೆಟ್ರೋಲಿಂಗ್ ಮಾಡುತ್ತಿರುವಾಗ ಹುಲಗಿ ಮಾರ್ಗದಿಂದ ವಾಹನವೊಂದು ಜಾನುವಾರು ಸಾಗಿಸುತ್ತಿದ್ದು, ಇದನ್ನು ಪರಿಶೀಲಿಸಿದಾಗ ಇಕ್ಕಟ್ಟಾದ ಸ್ಥಳದಲ್ಲಿ ಜಾನುವಾರುಗಳು ನಿಂತಿವೆ.
ಈ ವೇಳೆ ಜಾನುವಾರು ಸಾಗಾಟ ಅಕ್ರಮ ಎಂದು ತಿಳಿದು ಬಂದಿದೆ. ಜಾನುವಾರ ಸಾಗಾಟದ ಬಗ್ಗೆ ಚಾಲಕನನ್ನು ವಿಚಾರಿಸಿದಾಗ ಗಿಣಿಗೇರಿಯಿಂದ ಕರ್ನೂಲ್ನ ಆಲೂರಿಗೆ ಸಾಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಾಣಿಗಳ ಮೇಲಿನ ದೌರ್ಜನ್ಯ ಕಾಯ್ದೆಯಡಿ ಆರೋಪಿಗಳ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.