ಗಂಗಾವತಿ: ನಗರದಲ್ಲಿ ಅಮೃತ ಸಿಟಿ ಯೋಜನೆಯಡಿ ನಿರ್ಮಾಣ ಆಗುತ್ತಿರುವ ₹ 3 ಕೋಟಿ ವೆಚ್ಚದ ನೂತನ ನಗರಸಭೆ ಕಟ್ಟಡ ಕಾಮಗಾರಿ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿ, ನಾಲ್ಕು ವರ್ಷಗಳ ಹಿಂದೇ ಆರಂಭವಾದ ನಗರಸಭೆ ಕಟ್ಟಡ ನಿರ್ಮಾಣ ಕಾಮಗಾರಿ ಕೋವಿಡ್ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನನಗುದಿಗೆ ಬಿದ್ದಿತ್ತು.
ಇದೀಗ ಕಟ್ಟಡ ನಿರ್ಮಾಣ ಕಾಮಗಾರಿ ಶೇ 60ರಷ್ಟು ಪೂರ್ಣವಾಗಿದ್ದು, ಗುತ್ತಿಗೆದಾರನಿಗೆ ₹ 1.70 ಕೋಟಿ ಬಿಡುಗಡೆ ಮಾಡಲಾಗಿದೆ. ಹಾಗೇ ನಗರೋತ್ಥಾನ ಯೋಜನೆಯಡಿ ಹೆಚ್ಚುವರಿ ಕಾಮಗಾರಿಗಾಗಿ ₹ 1.5 ಕೋಟಿ ಮಂಜೂರು ಆಗಿದೆ.
ಇನ್ನೂ ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗೆ ₹ 25 ಲಕ್ಷ ನಗರಸಭೆ ಉಳಿತಾಯ ಬಜೆಟ್ ಬಳಕೆ ಮಾಡಲಾಗಿದೆ. ಹಾಗೇ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಅನುಕೂಲಕ್ಕಾಗಿ ರ್ಯಾಂಪ್ ನಿರ್ಮಿಸುವಂತೆ ಸೂಚನೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಕಟ್ಟದ ನಿರ್ಮಾಣ ಕಾಮಗಾರಿ ವಿಳಂಬವಾಗಿ ಹಲವು ವರ್ಷಗಳು ಗತಿಸಿವೆ. ಇನ್ನೂ ಐದು ತಿಂಗಳಲ್ಲಿ ನಗರಸಭೆ ಕಟ್ಟಡ ಉದ್ಘಾಟನೆ ಮಾಡುವ ಹಂತಕ್ಕೆ ತರಬೇಕು ಎಂದು ಹೇಳಿದರು.
ಎಇಇ ಅಭಿಷೇಕ ಮಾತನಾಡಿ, ನಗರಸಭೆಗೆ ಬಣ್ಣ, ವಿದ್ಯುತ್ ಪಿಠೋಪಕರಣ, ಒಳಗಾಂಗಣ ವಿನ್ಯಾಸಕ್ಕೆ ₹ 50ಲಕ್ಷ ಅಗತ್ಯವಿದ್ದು, ಅದನ್ನು ನಗರೋತ್ಥಾನ ಯೋಜನೆಯಡಿ ಬಳಸಿಕೊಳ್ಳಲು ಅವಕಾಶವಿದೆ ಎಂದರು.
ಈ ವೇಳೆಯಲ್ಲಿ ನಗರಪ್ರಾಧಿಕಾರ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ನಗರಸಭೆ ಸದಸ್ಯ ನವೀನ್ ಮಾಲಿ ಪಾಟೀಲ್, ಉಮೇಶ್ ಸಿಂಗನಾಳ, ಪರಶುರಾಮ ಮಡ್ಡೇರಾ, ಅಜಯ್ ಬಿಚ್ಚಾಲಿ, ವಾಸುದೇವ ನವಲಿ, ಶರಭೋಜಿರಾವ್ ಗಾಯಕ್ವಾಡ್, ನೀಲಕಂಟಪ್ಪ ಕಟ್ಟಿಮನಿ, ರಾಚಪ್ಪ ಸಿದ್ದಪುರ, ಜೆಇ ಶಂಕರಗೌಡ ಇದ್ದರು.