ಯಲಬುರ್ಗಾ: ವಾರಂತ್ಯ ಕರ್ಫ್ಯೂಗೆ ಪಟ್ಟಣದಲ್ಲಿ ದಿನದ ಪ್ರಾರಂಭದಲ್ಲಿ ಜನರ ಸ್ಪಂದನೆ ಕಂಡು ಬಂದರೆ ಕ್ರಮೇಣ ಯಾಥಾಸ್ಥಿತಿಗೆ ಮರಳಿ ಜನರು ಎಲ್ಲೆಂದರಲ್ಲಿ ಓಡಾಡುತ್ತಿರುವುದು ಕಂಡು ಬಂತು.
ಮುಖ್ಯ ರಸ್ತೆಗಳನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲ ರಸ್ತೆಗಳು ಹಾಗೂ ವಿವಿಧ ಓಣಿಗಳಲ್ಲಿರುವ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದವು. ಶಾಲೆ ಕಾಲೇಜುಗಳು ಬಂದ್ ಮಾಡಿದ್ದರಿಂದ ಮಕ್ಕಳು ಕೂಡಾ ಗುಂಪು ಗುಂಪಾಗಿಯೇ ಅಲ್ಲಲ್ಲಿ ಆಟವಾಡುತ್ತಿರುವುದು ಸಾಮಾನ್ಯವಾಗಿತ್ತು.
ಸಾರಿಗೆ ಸಂಸ್ಥೆಗಳ ಬಸ್ ಸಂಚಾರಕ್ಕೆ ಅವಕಾಶವಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸದೇ ಇದ್ದ ಕಾರಣ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮಧ್ಯಾಹ್ನದವರೆಗೂ ಬಂದೋಬಸ್ತ್ ಪರಿಣಾಮಕಾರಿ ಯಾಗಿಯೇ ನಡೆಯಿತಾದರೂ ನಂತರ ಜನರು ಹೊರಗಡೆ ಓಡಾಟ ನಡೆಸಿದರು.
ತಹಶೀಲ್ದಾರ್ ಶ್ರೀಶೈಲ ತಳವಾರ, ಸಿಪಿಐ ನಾಗರೆಡ್ಡಿ, ಪಿಎಸ್ಐ ಶಿವಕುಮಾರ ಮುಗ್ಗಳ್ಳಿ ಹಾಗೂ ಪಂಚಾಯಿತಿ ಅಧಿಕಾರಿಗಳು ಬಂದೋಬಸ್ತ್ಗಾಗಿ ಹರಸಾಹಸಪಟ್ಟರು.