ಕೊಪ್ಪಳ: ನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಗುರುವಾರ ರಾತ್ರಿ ಕಾರ್ತೀಕೋತ್ಸವ ಅಂಗವಾಗಿ ಸಾವಿರಾರು ದೀಪವನ್ನು ಸಂಭ್ರಮದಿಂದ ಬೆಳಗಲಾಯಿತು.
ಬೆಳಿಗ್ಗೆ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೀಪಾರಾಧನೆ ನಡೆಯಿತು. ದೇವಾಲಯದ ಸುತ್ತಮುತ್ತ ವಿವಿಧ ಆಕಾರಗಳಲ್ಲಿ ದೀಪಗಳನ್ನು ಹಚ್ಚಿಡಲಾಗಿತ್ತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಸಡಗರದಿಂದ ಪಾಲ್ಗೊಂಡರು. ಪ್ರಾಣದೇವರ ದೇವಸ್ಥಾನದಲ್ಲಿ ದೀಪವನ್ನು ಬೆಳಗಿದರು. ದೀಪೋತ್ಸವದ ಅಂಗವಾಗಿ ನಡೆದ ರಂಗೋಲಿ ಕಾರ್ಯಕ್ರಮ ಆಕರ್ಷಕವಾಗಿತ್ತು.
ಹರಕೆ ಹೊತ್ತ ಮತ್ತು ಆಸ್ತಿಕ ಭಕ್ತರು ತೈಲ, ದೀಪವನ್ನು ಖರೀದಿಸಿ ಆವರಣದಲ್ಲಿ ಬೆಳಗಿಸಿದರು. ದೀಪದ ಬೆಳಕಿನಲ್ಲಿ ದೇವಾಲಯದ ಸುಂದರವಾಗಿ ಕಾಣುತ್ತಿತ್ತು. ಉತ್ಸವದ ಅಂಗವಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆವರಣದಲ್ಲಿ ಧಾರ್ಮಿಕ ಪುಸ್ತಕ, ಪೂಜಾ ಸಲಕರಣೆಗಳ ಮಾರಾಟ ಚೆನ್ನಾಗಿ ನಡೆಯಿತು.
ದೀಪೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಸಮುದಾಯದ ಜನರು ನೆರೆವೇರಿಸಿದರು. ಬೆಳಿಗ್ಗೆ ನೈರ್ಮಾಲ್ಯ ವಿಸರ್ಜನೆ,ಸುಪ್ರಭಾತ, ವಿಶೇಷ ಪೂಜೆ,ಪ್ರಾಣ ದೇವರಿಗೆ ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ತೀಕೋತ್ಸವ ಸಂಪನ್ನಗೊಂಡಿತು.