ಗಂಗಾವತಿ: ತಾಲ್ಲೂಕಿನಲ್ಲಿ ಆಕ್ರಮವಾಗಿ ನಡೆಯುತ್ತಿರುವ ಗೋಹತ್ಯೆಯನ್ನು ತಡೆಯುವಲ್ಲಿ ನಗರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪದಾಧಿಕಾರಿಗಳು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿ, ಈ ಹಿಂದೆ ಅಮರ್ ಭಗತ್ಸಿಂಗ್ ನಗರದ ಮಸೀದಿ ಬಳಿ, ಇತ್ತೀಚೆಗೆ ಎಚ್.ಆರ್.ಎಸ್ ಕಾಲೋನಿಯಲ್ಲಿ ನಡೆಯುತ್ತಿದ್ದ ಆಕ್ರಮ ಕಸಾಯಿಖಾನೆ ಮೇಲೆ ಪೋಲಿಸ್ ಇಲಾಖೆ ದಾಳಿ ನಡೆಸಿ, ಕೋಣಗಳನ್ನು ರಕ್ಷಿಸಿ, ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಇಷ್ಟೇಲ್ಲ ಆದರೂ ತಾಲ್ಲೂಕಿನಲ್ಲಿ ಗೋಹತ್ಯೆ ನಿಲ್ಲದೆ ಇರುವುದು ದುರಂತವಾಗಿದೆ. 2020ರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯದ ಪ್ರಕಾರ 13 ವರ್ಷ ಕೆಳಗಿರುವ ಪ್ರಾಣಿಗಳ ವಧೆಗೆ ಅವಕಾಶ ಇರುವುದಿಲ್ಲ. ಅಂತಹ ಕಸಾಯಿಖಾನೆಗಳು ಕಂಡು ಬಂದಲ್ಲಿ ನಗರಸಭೆ ಕೂಡಲೆ ದಾಳಿ ನಡೆಸಿ, ಸ್ಥಳ ಜಪ್ತಿ ಮಾಡಿಕೊಳ್ಳುವ ಆದೇಶವಿದೆ. ಆದರೆ ಪೌರಾಯುಕ್ತರು ಕೆಲ ನಗರಸಭೆ ಸದಸ್ಯರ ಒತ್ತಡಕ್ಕೆ ಮಣಿದು, ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ತಾಲ್ಲೂಕಿನಲ್ಲಿ ಗೋಹತ್ಯೆ ನಿಷೇಧದ ಕುರಿತು ಅಶಾಂತಿ ಉಂಟಾಗಿತ್ತು. ಹೀಗೆ ಗೋಹತ್ಯೆಗಳು ನಡೆದರೆ ಮತ್ತೆ ಅಶಾಂತಿ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದರು.
ಗೋವನ್ನು ತಾಲ್ಲೂಕಿನಲ್ಲಿ ಕೆಲವರು ವಧೆ ಮಾಡುತ್ತಿದ್ದು, ಇದು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಆದ್ದರಿಂದ ಪೌರಾಯುಕ್ತರು ಕೂಡಲೆ ಪ್ರಾಣಿವಧೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದರ ಜತೆಗೆ, ಆಕ್ರಮ ಕಸಾಯಿಖಾನೆಗಳನ್ನು ನೆಲಸಮ ಮಾಡಬೇಕು ಎಂದು ಆಗ್ರಹಿಸಿದರು. ನಂತರ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ಜಿಲ್ಲಾ ಸಂಚಾಲಕ ಅಯ್ಯನಗೌಡ ಹೇರೂರು, ವೀರೇಶ ಕೋಲ್ಕಾರ, ಶ್ರೀಕಾಂತ ಹೊಸಕೇರಾ, ನಾಗರಾಜ ಚಳಗೇರಿ, ಶಿವು, ಅಮರೇಶ್, ಆನಂದ್, ಚನ್ನಯ್ಯ, ವಿರೇಶ್ ಇದ್ದರು.