ಕೊಪ್ಪಳ: ದೇಶದ ಪ್ರಜಾತಂತ್ರವನ್ನು ಎತ್ತಿ ಹಿಡಿದ ಜ.26ರ ಗಣರಾಜ್ಯೋತ್ಸವ ಮತ್ತು ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಮಾತ್ರ ದೇಶದ ಬಹುದೊಡ್ಡ ಹಬ್ಬಗಳು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ಅಭಿಪ್ರಾಯಟ್ಟರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ, ಜವಾಹರಲಾಲ ನೆಹರು, ಭಗತ್ ಸಿಂಗ್, ಸರ್ದಾರ್ ವಲ್ಲಭಬಾಯಿ ಪಟೇಲ್, ಝಾಕೀರ್ ಹುಸೇನ್ ಸೇರಿದಂತೆ ಅನೇಕರ ತ್ಯಾಗ, ಬಲಿದಾನದಲ್ಲಿ ಸ್ವಾತಂತ್ರ್ಯ ದೊರೆತಿದೆ ಎಂದು ಹೇಳಿದರು.
ನಮ್ಮ ದೇಶದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದೆ. ಸಂವಿಧಾನ ಇರದೇ ಇದ್ದರೆ ಎಲ್ಲ ಸಮಾಜಗಳಿಗೆ ನ್ಯಾಯಸಿಗುತ್ತಿರಲಿಲ್ಲ. ಆದರ್ಶ ಸಂವಿಧಾನದಿಂದ ಮಹಿಳೆ, ಬಡವರಿಗೆ ಸಮಾನತೆ ಬಂದಿದೆ. ದೇಶದ ಯಾವುದೇ ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಹೋದರೂ ನಮ್ಮ ಹಕ್ಕುಗಳನ್ನು ಧೈರ್ಯದಿಂದ ಚಲಾಯಿಸಲು ಸಂವಿಧಾನ ರಕ್ಷಣೆಯಾಗಿ ನಿಂತಿದೆ ಎಂದರು.
ಯುವಕರು ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವನ್ನು ಅರಿಯಬೇಕು. ಅನ್ಯಾಯದ ವಿರುದ್ಧ ಹೋರಾಡುವ, ಪ್ರಶ್ನಿಸುವ ಮನೋಭಾವವನ್ನು ನಮ್ಮ ಸಂವಿಧಾನ ನೀಡಿದೆ. ಈ ಮೊದಲು ದೇಶದಲ್ಲಿ 35 ಕೋಟಿ ಜನರಿದ್ದರೂ ಒಂದು ಹೊತ್ತಿನ ಊಟಕ್ಕೆ ಪರದಾಡುವಂತೆ ಆಗಿತ್ತು. ಈಗ 120 ಕೋಟಿ ಜನರು ಇದ್ದರೂ ಸಂವಿಧಾನದ ಆಶಯದ ಮೇರೆಗೆ ಎಲ್ಲರಿಗೂ ಊಟ, ವಸತಿ ದೊರೆಯುತ್ತಿರುವುದು ಪ್ರಜಾತಂತ್ರದ ಯಶಸ್ವಿಗೆ ಸಂವಿಧಾನ ಕಾರಣವಾಗಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಜಾತಿ, ನೂರಾರು ಧರ್ಮಗಳು ಇದ್ದರೂ ಮಾದರಿಯಾಗಿದೆ. ಶೇ 50ರಷ್ಟು ಯುವಕರು ಇದ್ದಾರೆ. ಅವರಲ್ಲಿ ನಮ್ಮ ಕನಸಿನ ಭಾರತವನ್ನು ಬಿತ್ತಬೇಕು. ದೇಶ ಸದೃಢಗೊಳ್ಳುವ ಕನಸು ನನಸು ಮಾಡಬೇಕು. ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿದ್ದ ನಮ್ಮ ದೇಶ ಈಗ ವಿಶ್ವದಲ್ಲಿ 10ರೊಳಗಿನ ಸ್ಥಾನ ಪಡೆದಿದೆ ಎಂದು ಹೇಳಿದರು.
ಎಷ್ಟೇ ಜಾತಿ, ಧರ್ಮಗಳಿದ್ದರೂ ಪ್ರಜಾಪ್ರಭುತ್ವಕ್ಕಿಂತ ದೊಡ್ಡವರು ಯಾರೂ ಇಲ್ಲ. ಸಂವಿಧಾನವನ್ನು ಕೇವಲ ಒಂದು ಸಮಾಜಕ್ಕೆ ಬರೆಯಲಿಲ್ಲ. ಎಲ್ಲರ ಘನತೆ, ಸಮಾನತೆಗೆ ನಮ್ಮ ಸಂವಿಧಾನ ರಚನೆಗೊಂಡಿದೆ. ಅಂತಹ ಮಾದರಿಯನ್ನು ರಚಿಸಿದ ಎಲ್ಲ ಹೋರಾಟಗಾರರು ಅಜರಾಮರವಾಗಿದ್ದಾರೆ ಎಂದು ಹೇಳಿದರು.
ಹಿಂದಿನ ಸರ್ಕಾರದ ಎಲ್ಲ ಯೋಜನೆಗಳು ಮುಂದುವರೆಯುತ್ತವೆ. ರೈತರು ಇದ್ದರೆ ಮಾತ್ರ ನಮ್ಮ ದೇಶ. ಹಾಗಾಗಿ ಅವರಿಗಾಗಿ ಯೋಜನೆ ಜಾರಿಮಾಡಲಾಗುತ್ತಿದೆ. ನಮ್ಮ ಇಲಾಖೆ ಮೂಲಕಹೊಸ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.
ಸಂಸದೀಯ ಕಾರ್ಯದರ್ಶಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳಅಧ್ಯಕ್ಷತೆ ವಹಿಸಿದ್ದರು.
ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿಶ್ವನಾಥ ರೆಡ್ಡಿ, ಉಪಾಧ್ಯಕ್ಷೆ ರತ್ನವ್ವ ನಗರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್,ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಆರ್.ಎಸ್.ಪೆದ್ದಪ್ಪಯ್ಯ, ವಲಯ ಅರಣ್ಯ ಅಧಿಕಾರಿ ಯಶಪಾಲ್ ಕ್ಷೀರಸಾಗರ, ಉಪವಿಭಾಗಾಧಿಕಾರಿಸಿ.ಡಿ.ಗೀತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.