ಗಂಗಾವತಿ: ‘ತಾಲ್ಲೂಕಿನಲ್ಲಿ ಚಿರತೆ ಉಪಟಳ ಹೆಚ್ಚಿದೆ. ಇಬ್ಬರು ಯುವಕರು ಬಲಿಯಾಗಿದ್ದಾರೆ. ಸಂಜೆ ವೇಳೆ ಗ್ರಾಮಸ್ಥರು ಒಬ್ಬೊಬ್ಬರೇ ತಿರುಗಾಡಬಾರದು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್ ರಫಿ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ವತಿಯಿಂದ ತಾಲ್ಲೂಕಿನ ಸಣಾಪುರ, ಆನೆಗೊಂದಿ, ಮಲ್ಲಾಪುರ ಹಾಗೂ ಸಂಗಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗುರುವಾರ ನಡೆದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
‘ಯಾರೂ ಒಂಟಿಯಾಗಿ ಮೊಬೈಲ್ ಬಳಸುತ್ತ ನಿರ್ಜನ ಪ್ರದೇಶದಲ್ಲಿ ತಿರುಗಾಡಬಾರದು. ಹೊಲ, ಗದ್ದೆಗಳ ಕೆಲಸಕ್ಕೆ ಕನಿಷ್ಠ ಇಬ್ಬರು ಸೇರಿ ಹೋಗಬೇಕು. ಕುಡಗೋಲು, ಕೊಡಲಿಯಂಥ ಆಯುಧ ತೆಗೆದುಕೊಂಡು ಹೋಗಬೇಕು’ ಎಂದರು.
‘ಗುಡ್ಡದ ಪಾತ್ರದಲ್ಲಿ ಮನೆ ಇರುವವರು ಮಕ್ಕಳನ್ನು ಹೊರಗೆ ಬಿಡದೆ ಅವರ ಮೇಲೆ ಗಮನ ಇಡಬೇಕು. ಜಾಗ್ರತೆಯಿಂದ ಇರಬೇಕು’ ಎಂದು ಗ್ರಾಮಸ್ಥರಿಗೆ ತಿಳಿ ಹೇಳಿದರು.
ಆನೆಗೊಂದಿ ಹಾಗೂ ಸಣಾಪುರ ಗ್ರಾಮಗಳಲ್ಲಿ ಸಾಹಿತಿ ರಮೇಶ ಗಬ್ಬೂರು ತಂಡ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿತು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಪ್ಪ, ಆನೆಗೊಂದಿ ಹಾಗೂ ಸಣಾಪುರ ಪಿಡಿಒಗಳಾದ ಕೃಷ್ಣಪ್ಪ, ಬಸವರಾಜ ಗೌಡರ್, ಕರ ವಸೂಲಿಗಾರ ರಾಘವೇಂದ್ರ, ಹಾಗೂ ಚಾರಣ ಬಳಗದ ಡಾ.ಶಿವಕುಮಾರ ಮಾಲಿಪಾಟೀಲ ಹಾಗೂ ಮಂಜುನಾಥ ಗುಡ್ಲಾನೂರ ಇದ್ದರು.