ಕನಕಗಿರಿ: ಮುಹಮ್ಮದ್ ಪೈಗಂಬರ್ ಅವರು ಬೋಧಿಸಿದ ಚಿಂತನೆ, ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತ ವಾಗಿವೆ. ಯುವ ಸಮುದಾಯ ಇಂಥ ಉದಾತ್ತ ಚಿಂತನೆ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಮೌಲಾನ್ ಮಹ್ಮದ ಸಜ್ಜಾದ ರಜಾ ನೂರಿ ತಿಳಿಸಿದರು.
ಇಲ್ಲಿನ ಜಾಮೀಯಾ ಮಸೀದಿಯಲ್ಲಿ ಮಂಗಳವಾರ ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣವಿಲ್ಲದೆ ಯಾವ ಸಮಾಜವೂ ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎಂಬುದನ್ನು ಮುಸ್ಲಿಂರು ಮೊದಲು ಅರಿತು ಕೊಳ್ಳಬೇಕು. ಅಂದಾಗ ಮಾತ್ರ ಸುಧಾರಣೆಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸರ್ಕಾರ ಎಲ್ಲಾ ವರ್ಗದ ಜನರಿಗೆ ವಿವಿಧ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಇಂಥ ಸೌಕರ್ಯಗಳನ್ನು ಸದುಪಯೋಗ ಪಡೆದುಕೊಳ್ಳುವ ಮೂಲಕ ಆರ್ಥಿಕಗಿ ಸಬಲರಾಗಬೇಕು ಹೇಳಿದರು.
ಪ್ರಮುಖ ಚಂದುಸಾಬ ಸೂಳೇಕಲ್ ಅವರು ಕುರಾನ್ ಪಠಣ ಹಾಗೂ ಈದ್ಮಿಲಾದ ಹಬ್ಬದ ಆಚರಣೆಯ ಮಹತ್ವ ಕುರಿತು ತಿಳಿಸಿದರು. ಮಸೀದಿ ಸಮಿತಿ ಕಾರ್ಯದರ್ಶಿ ಶಾಮೀದಸಾಬ ಲೈನದಾರ ಮಾತನಾಡಿದರು.
ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಮೆಹಬೂಬಸಾಬ ಗುರಿಕಾರ, ಎಪಿಎಂಸಿ ಮಾಜಿ ಸದಸ್ಯ ಇಮಾಮಸಾಬ ಎಲಿಗಾರ, ಸಮಿತಿಯ ಪದಾಧಿಕಾರಿಗಳಾದ ಯಮನೂರಸಾಬ ಬಾಗಲಿ, ಮಹ್ಮದಸಾಬ ಸೂಳೇಕಲ್, ಗುಡುಸಾಬ ಗುರಿಕಾರ, ಇಮಾಮ ಹುಸೇನ ಹುಚ್ಚುಬುರಕಿ, ನಾನಸಾಬ, ಮಹ್ಮದಸಾಬ ಅಗರಬತ್ತಿ, ಹುಸೇನಸಾಬ ಬುಡಕುಂಟಿ ಇದ್ದರು.
ಮೆಕ್ಕಾ ಮದೀನ್, ಬರೇಲಿ ಷರೀಫ್ ಚಿತ್ರಗಳಿಗೆ ಪೂಜೆ ಸಲ್ಲಿಸಿ ಹೂವುಗಳಿಂದ ಅಲಂಕಾರಗೊಳಿಸಲಾಗಿತ್ತು.
ಸಾಮೂಹಿಕ ಪ್ರಾರ್ಥನೆ ಮುಗಿದ ನಂತರ ಸಿಹಿ ವಿತರಣೆ ಹಾಗೂ ಮಸೀದಿ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಪಟ್ಟಣದ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಯಿತು.