ಗಂಗಾವತಿ: ತಾಲ್ಲೂಕಿನ ಆನೆಗೊಂದಿ, ಕಡೆಬಾಗಿಲು, ಗೂಗಿಬಂಡಿ, ಗೂಗಿಬಂಡಿ ಕ್ಯಾಂಪ್, ಬಸವನದುರ್ಗಾ, ಬಂಡಿಬಸಪ್ಪ ಕ್ಯಾಂಪ್, ಸಾಯಿನಗರ, ರಾಯಲು ನಗರ, ನಾಗರಹಳ್ಳಿ, ವಡ್ಡರಹಟ್ಟಿ ಕ್ಯಾಂಪ್ ಗ್ರಾಮದಲ್ಲಿ ಮಂಗಳವಾರ ಕೆಆರ್ಪಿ ಪಕ್ಷದಿಂದ ಚುನಾವಣೆ ಮತ ಪ್ರಚಾರ ನಡೆಸಲಾಯಿತು.
ಕೆಆರ್ಪಿ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಅಧಿಕೃತವಾಗಿ ಫುಟ್ಬಾಲ್ (ಚೆಂಡು) ಚಿಹ್ನೆ ದೊರೆತ ನಂತರ ಮೊದಲ ಪ್ರಚಾರ ಕಾರ್ಯಕ್ರಮ ಇದಾಗಿದ್ದು, ಪಕ್ಷದ ಸಂಸ್ಥಾಪಕ ಜನಾರ್ದನರಡ್ಡಿ ಕೈಯಲ್ಲಿ ಫುಟ್ಬಾಲ್ ಹಿಡಿದು ಜನರಿಗೆ ಅಭಿವೃದ್ಧಿ ಭರವಸೆ ನೀಡಿದರು.
ನಂತರ ಮಾತನಾಡಿ, ಗ್ರಾಮಗಳಿಗೆ ಬೇಕಾದ ಅಗತ್ಯ ಸೌಕರ್ಯ, ಸಮಸ್ಯೆ, ಅಭಿವೃದ್ಧಿ ಕಾರ್ಯಗಳು ಮಾಡುತ್ತೇನೆ. ಒಂದೇ ಅವಕಾಶ ನೀಡಿ. ಗಂಗಾವತಿ ಚಿತ್ರಣವನ್ನೇ ಬದಲಿಸಿ, ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ನಂತರ ಪಕ್ಷದ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ, ಮತ ನೀಡುವಂತೆ ಜನರನ್ನು ಕೋರಿದರು.
ಸಂಗಾಪುರ ಗ್ರಾ.ಪಂ ಸದಸ್ಯರಾದ ಲಕ್ಷ್ಮವ್ವ ಹನುಮಂತಪ್ಪ ಗುಂಟೂರು, ಬಿ.ಗೋಪಿ ಸೇರಿ ತಾಳೂರು ಸತ್ಯನಾರಾಯಣ ಕೆಆರ್ಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ಗ್ರಾಮೀಣ ಘಟಕದ ಅಧ್ಯಕ್ಷ ದುರ್ಗಪ್ಪ ಆಗೋಲಿ, ಪಕ್ಷದ ಮುಖಂಡರಾದ ಸೈಯದ್ ಜಿಲಾನಿ ಪಾಷ, ಜೋಗದ ದುರ್ಗಪ್ಪ ನಾಯಕ, ಯಮನೂರು ಚೌಡ್ಕಿ ಇದ್ದರು.