ಕುಕನೂರು: ‘ಪ್ರತಿಯೊಬ್ಬರಲ್ಲಿಯೂ ಪರಿಸರ ಪ್ರಜ್ಞೆ ಮೂಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದರ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ಸಸಿ ನೆಟ್ಟು ಮಾತನಾಡಿದರು.
ಗುಡ್ಡ, ಗಿಡ–ಮರಗಳನ್ನು ಕಡಿದು ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ. ಬದುಕಿಗೆ ಬೇಕಾದದ್ದು, ಉತ್ತಮ ಪರಿಸರ ಎಂಬುದನ್ನು ಮರೆತು ವೈಭವೀಕರಣದ ಜೀವನವೇ ಬದುಕು ಎಂಬ ಭ್ರಮೆಯಲ್ಲಿದ್ದೇವೆ. ದಿನೇ ದಿನೇ ಪರಿಸರ ನಾಶವಾಗುತ್ತಿರುವುದರಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಇದು ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕಾಡು ಉಳಿದರೆ ನಾಡು ಬೆಳೆಯುತ್ತದೆ ಎಂದರು.
ಗಿರಿಧರ್ ಜೋಷಿ, ಆನಂದ ಗರೂರ, ಸುಶಿಲೇಂದ್ರರಾವ್ ದೇಶಪಾಂಡೆ, ಬಸಪ್ಪ, ಸತೀಶ ಹಟ್ಟಿ, ಶರಣಪ್ಪ ಹಾಳಕೇರಿ, ರೇಣುಕಾ ಠಂಕಾದ್, ಪೂಜಾ, ರವಿಕುಮಾರ, ಪಕ್ಕಿರಪ್ಪ, ಶಿವರಾಜ ಹಾಗೂ ರವಿ ಇದ್ದರು.