ಕಾರಟಗಿ: ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ನಲ್ಲಿ ಸೋಮವಾರ ರೈತ ದಿನಾಚರಣೆಯನ್ನು ವಿಶಿಷ್ಟ ಹಾಗೂ ವಿಭಿನ್ನವಾಗಿ ಆಚರಿಸಲಾಯಿತು.
ರೈತರನ್ನು ಶಾಲೆಗೆ ಅಹ್ವಾನಿಸಿ, ಅವರ ಪರಿಶ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು. ರೈತರಿಗೆ ಹೂಮಾಲೆ ಹಾಕಿ, ಸನ್ಮಾನಿಸಿ, ಪಾದಪೂಜೆ ಮಾಡಿ ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ಗುಣಗಾನ ಮಾಡಲಾಯಿತು.
ಶಾಲಾ ಮುಖ್ಯಸ್ಥರಾದ ಮಲ್ಲಿಕಾರ್ಜುನ ಬಿಜಕಲ್, ವಿದ್ಯಾರ್ಥಿಗಳು ರೈತರ ವೇಷದಲ್ಲಿ ಕಂಗೊಳಿಸಿದ್ದು ಗಮನ ಸೆಳೆಯಿತು. ವಿದ್ಯಾರ್ಥಿಗಳೊಂದಿಗೆ ಭತ್ತದ ಜಮೀನುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಬೆಳೆಯು ಕೈಗೆ ಬರುವುದರ ಹಿಂದಿರುವ ಶ್ರಮದ ಬೆಲೆಯನ್ನು ತಿಳಿಸಲಾಯಿತು.
ಆಡಳಿತ ಮಂಡಳಿಯ ಮುಖ್ಯಸ್ಥರಾದ ಮಲ್ಲಿಕಾರ್ಜುನ ಬಿಜಕಲ್ ಮತ್ತವರ ಧರ್ಮಪತ್ನಿ ಲೀಲಾ ಎಂ. ಬಿಜಕಲ್ ಅಹ್ವಾನಿಸಿದ ರೈತರಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಂಡು, ಆತಿಥ್ಯ ನೀಡಿ ಗೌರವಿಸಿದರು.
ಲೀಲಾ ಮಲ್ಲಿಕಾರ್ಜುನ ಬಿಜಕಲ್ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ನೈತಿಕ ಧೈರ್ಯ, ಸ್ಥೈರ್ಯ ತುಂಬುವುದರೊಂದಿಗೆ ಅವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.