ಕುಕನೂರು: ಸ್ವಸಹಾಯ ಸಂಘದ ಮಹಿಳೆಯರು ನರೇಗಾ ಯೋಜನೆಯಡಿ ಬರುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ತಾಲ್ಲೂಕು ಪಂಚಾಯಿತಿ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಹೇಳಿದರು.
ತಾಲ್ಲೂಕಿನ ಬೆಣಕಲ್ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ರೋಜಗಾರ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನರೇಗಾ ಯೋಜನೆಯಲ್ಲಿ ಸಾಕಷ್ಟು ಯೋಜನೆಗಳಿದ್ದು, ತಮ್ಮ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿಗಳಾದ ಕುರಿ, ಮೇಕೆ, ಕೋಳಿ ಶೆಡ್ ನಿರ್ಮಿಸಿಕೊಳ್ಳಬಹುದು. ಇದರಿಂದ ಕೋಳಿ ಸಾಕಾಣಿಕೆ, ಮೇಕೆ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸಬಲರಾಗಬಹುದು ಎಂದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್ಆರ್ಎಲ್ಎಂ) ವಲಯ ಮೇಲ್ವಿಚಾರಕಿ ಪೂಜಾ ನಾಯಕ್ ಮಾತನಾಡಿ, ಜಿಲ್ಲಾ ಪಂಚಾಯಿತಿ ವತಿಯಿಂದ ಮಿಷನ್ 153 ಅಡಿಯಲ್ಲಿ ಎನ್ಆರ್ಎಲ್ಎಂ, ಎನ್ಬಿಕೆ ಸ್ವಸಹಾಯ ಸಂಘದ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅಗರಬತ್ತಿ ತಯಾರಿಸಲು ಸಹಾಯ ಮಾಡಲಾಗುವುದು. ಇದರ ಸೌಲಭ್ಯವನ್ನು ಸಂಘದ ಪ್ರತಿಯೊಬ್ಬರೂ ಪಡೆಯಬೇಕು ಎಂದು ಸಲಹೆ ನೀಡಿದರು.
ಸಂಘದ ಪ್ರತಿಯೊಬ್ಬ ಸದಸ್ಯರು ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ವಿಮೆ ಮಾಡಿಸುವಂತೆ ಕೆನರಾ ಬ್ಯಾಂಕ್ ಹಣಕಾಸು ನಿರ್ವಹಣೆಯ ಸಂಯೋಜಕ ಪಂಪನಗೌಡ್ರ ಮಾಹಿತಿ ನೀಡಿದರು. ಅಗರಬತ್ತಿ ತಯಾರಿಕೆ ಹಾಗೂ ಇತರೆ ಸ್ವಯಂ ಉದ್ಯೋಗ ಬಗ್ಗೆ ಆರ್.ಶೆಟ್ಟಿ ಸಂಸ್ಥೆ ನಿರ್ದೇಶಕ ಮಾಹಿತಿ ನೀಡಿದರು.
ಪಿಡಿಒ ಕೃಷ್ಣಾರೆಡ್ಡಿ, ಎನ್ಆರ್ ಎಲ್ಎಂ, ಎನ್ಬಿಕೆ ಸ್ವಸಹಾಯ ಸಂಘದ ಮಹಿಳೆಯರು ಇದ್ದರು.