ಕೊಪ್ಪಳ: ‘ಅಭಿವೃದ್ಧಿ ಕೆಲಸ ಮಾಡಲು ಖಜಾನೆಯಲ್ಲಿ ಹಣ ಖಾಲಿಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನರ ಗಮನ ಬೇರೆಡೆ ಸೆಳೆಯಲು ಕುತಂತ್ರ ಮಾಡುತ್ತಿದ್ದಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಜಾಬ್ ನಿಷೇಧ ವಾಪಸ್ ಕುರಿತು ಮುಖ್ಯಮಂತ್ರಿ ನೀಡಿದ ಹೇಳಿಕೆ ಬಗ್ಗೆ ಅವರು ಈ ಪ್ರತಿಕ್ರಿಯೆ ನೀಡಿದರು.
‘ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾದ ಮೇಲೆಯೇ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಎಳೆದು ತರಲಾಗಿದೆ. ಹಿಂದೆ ಯುಪಿಎ ಸರ್ಕಾರ ಆಡಳಿತ ನಡೆಸಿದಾಗ ಯಾಕೆ ಅವರನ್ನು ಪ್ರಧಾನಿ ಮಾಡಲಿಲ್ಲ. ದಲಿತ ಸಿಎಂ, ಪಿಎಂ. ಎನ್ನುವುದು ಕಾಂಗ್ರೆಸ್ನ ಗಿಮಿಕ್‘ ಎಂದು ಹೇಳಿದರು.
‘ಕಾಂಗ್ರೆಸ್ ಮುಳುಗುವ ಹಡಗು, ಒಬ್ಬೊಬ್ಬರೇ ಇಳಿದು ಹೋಗುವುದು ಸ್ವಾಭಾವಿಕ. ಹರಿಪ್ರಸಾದ್ ಸೇರಿದಂತೆ ಹಲವರು ರಾಜಕೀಯ ಅಸ್ತಿತ್ವಕ್ಕಾಗಿ ಹೊರಹೋಗಬಹುದು. ಹಿಂದುಳಿದವರನ್ನು ಕಾಂಗ್ರೆಸ್ನಲ್ಲಿ ಎಂದೂ ಗೌರವಯುತವಾಗಿ ನಡೆಸಿಕೊಂಡಿಲ್ಲ. ಹರಿಪ್ರಸಾದ್ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂದರು.