ಕೊಪ್ಪಳ: ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜ್ಞಾನಬಂಧು ವಸತಿ ಶಾಲೆಯ ವಿದ್ಯಾರ್ಥಿನಿ ಸಾಹಿತ್ಯ ಎಂ.ಗೊಂಡಬಾಳ ಹುಸುಕಿನಲ್ಲಿ ಚಿತ್ರ ಬಿಡಿಸಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ.
ಶಾಲೆಯ ಮುಖ್ಯಸ್ಥ ದಾನಪ್ಪ ಕವಲೂರ ಮತ್ತು ಶಿಕ್ಷಕ ಶರಣಪ್ಪ ಅವರಮಾರ್ಗದರ್ಶನದಲ್ಲಿ ಮಕ್ಕಳು ಗೃಹ ಕಲಾ ಸಮಯದಲ್ಲಿ ಈ ಕಲಾಕೃತಿ ಮಾಡಿದ್ದು, ಕಿನ್ನಾಳ ರಸ್ತೆ ಆರೋಗ್ಯ ಬಡಾವಣೆಯ ಮನೆಯ ಪಕ್ಕದಲ್ಲಿದ್ದಮರಳಿನ ದಿಬ್ಬವನ್ನೇ ಬಳಸಿಕೊಂಡು ಕೊರೊನಾ ಜಾಗೃತಿ ಮೂಡಿಸಿದ್ದು, ದಾರಿಹೋಕರು ನಿಂತು ನೋಡಿ ಹೋಗುತ್ತಿದ್ದಾರೆ.
ಮಕ್ಕಳು ಮನೆಯಲ್ಲಿದ್ದು ಕೇವಲ ಮೊಬೈಲ್ ಗೀಳು ಅಂಟಿಸಿಕೊಂಡಿದ್ದು, ಗೇಮ್ ಅಥವಾ ಟಿವಿ ನೋಡುವುದೇ ಕೆಲಸವಾಗಿಬಿಟ್ಟಿದೆ. ಇಂಥ ಸಮಯದಲ್ಲಿ ಪೋಷಕರ ಮಾರ್ಗದರ್ಶನದಲ್ಲಿ ಇಂಥ ಕಲಾಕೃತಿಗಳು ಮಕ್ಕಳ ಸೃಜನಶೀಲತೆ ಬೆಳೆಯಲು ಹಾಗೂ ಉತ್ಸಾಹದಿಂದ ಇರುವಂತೆ ಮಾಡುತ್ತವೆ ಎಂದು ಮಕ್ಕಳ ತಜ್ಞ ವೈದ್ಯರು ಹೇಳುತ್ತಾರೆ.
ಸಿಪಿಎಸ್ ಶಾಲೆಯ ಅಕ್ಷರ ಗೊಂಡಬಾಳ ಸಹ ಕಲೆಗೆ ಸಾಥ್ ನೀಡಿದ್ದು, ಇನ್ನಷ್ಟು ಜಾಗೃತಿ ಸಾರುವ ಚಿತ್ರಗಳನ್ನು ಮಾಡುವಂತೆ; ಆರೋಗ್ಯ ಇಲಾಖೆ ಸುಪರಿಂಟೆಂಡೆಂಟ್ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣವರ ಶುಭ ಹಾರೈಸಿ ನಗದು ಬಹುಮಾನ ನೀಡಿದ್ದಾರೆ.
ಮಕ್ಕಳಿಗೆ ಸಂಭವನೀಯ ಕೊರೊನಾ ಮೂರನೇ ಅಲೆ ತೀವ್ರ ತೊಂದರೆ ನೀಡುತ್ತದೆ ಎಂಬ ತಜ್ಞರ ಸಲಹೆ ಇದ್ದು, ಮಕ್ಕಳು ಮನೆಯಲ್ಲಿಯೇ ಸುರಕ್ಷಿತವಾಗಿದ್ದು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಮತ್ತುಪರಸ್ಪರ ಅಂತರ ಕಾಪಾಡಿಕೊಳ್ಳಿ, ಓದಿನತ್ತ ಗಮನ ಹರಿಸಿ ಎಂಬ ವಿಡಿಯೊ ಸಂದೇಶವೂ ಸಹ ಮೆಚ್ಚುಗೆ ಪಡೆದಿದೆ.