ಹನುಮಸಾಗರ: ಸಾರ್ವಜನಿಕರ ಒತ್ತಡದ ನಿಮಿತ್ತ ಶನಿವಾರ ಸಂಸದ ಸಂಗಣ್ಣ ಕರಡಿ ಅವರು, ಇಲ್ಲಿನ ಬೆಟ್ಟದ ಕೆಳಗಿರುವ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಎರಡು ದಶಕದಿಂದ ಮಳೆ ಇಲ್ಲದೆ ಈ ಭಾಗದಲ್ಲಿ ಅಂತರ್ಜಲ ಕುಸಿದಿದ್ದು ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಕೃಷ್ಣಾ ಜಲ ಭಾಗ್ಯ ನಿಗಮದ ಕೆರೆ ತುಂಬಿಸುವ ಯೋಜನೆಯಲ್ಲಿ ಹನುಮಸಾಗರ ಕೆರೆಯನ್ನು ಸೇರಿಸಿಕೊಳ್ಳಬೇಕು ಎಂದು ಜನರು ಒತ್ತಾಯಿಸಿದರು.
ಮುಖಂಡ ಬಸವರಾಜ ಹಳ್ಳೂರ ಮನವಿ ಮಾಡಿ, ಈ ಕೆರೆ ತುಂಬಿದರೆ ಸುತ್ತಲಿನ ಕೊಳವೆ ಬಾವಿಗಳಿಗೆ ನೀರಿನ ಆಸರೆ ದೊರಕುತ್ತದೆ. ಸುತ್ತಲಿನ ಹಲವಾರು ಕೆರೆಗಳನ್ನು ಈ ಯೋಜನೆಗೆ ಒಳಪಡಿಸಿದ್ದರೆ ಇಲ್ಲಿನ ಕೆರೆ ಮಾತ್ರ ಕರೆ ತುಂಬಿಸುವ ಯೋಜನೆಗೆ ಅಳವಡಿಸಿಲ್ಲ ಎಂದು ಹೇಳಿದರು.
ಕೆರೆ ಪರಿಶೀಲಿಸಿದ ಬಳಿಕ ಸಂಸದರ, ಕೆರೆ ಸಮೀಕ್ಷೆ ಮಾಡಿ ಯೋಜನೆಯಲ್ಲಿ ಸೇರಿಸುವಂತೆ ಎಂಜಿನಿಯರ್ ಯುವರಾಜ ಅವರಿಗೆ ಸೂಚಿಸಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಬಸವರಾಜ ಹಳ್ಳೂರ, ತಹಶೀಲ್ದಾರ ಎಮ್.ಸಿದ್ದೇಶ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ, ವಿಠಲ್ಶ್ರೇಷ್ಠಿ ನಾಗೂರ ಇದ್ದರು.